ಕೃಷ್ಣಾ ಅಣೆಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಏಪ್ರಿಲ್ 10 ಮಧ್ಯರಾತ್ರಿಯಿಂದ ನೀರು ಹರಿಸುವುದು ಸ್ಥಗಿತಗೊಳ್ಳಲಿದೆ.
ನವೆಂಬರ್ 23ರಂದು ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ನದಿ ನೀರು ಬಳಕೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ(ಐಸಿಸಿ) ಡಿ.12ರಿಂದ ಮಾ.30 ರವರೆಗೆ ವಾರಾಬಂಧಿ ಪದ್ಧತಿಯಲ್ಲಿ ಹಿಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ರೈತರ ಬೇಡಿಕೆಯ ಹಿನ್ನಲೆಯಲ್ಲಿ ಅದನ್ನು ಏ.10 ರವರೆಗೆ ವಿಸ್ತರಿಸಲಾಗಿತ್ತು. ಇದೀಗ, ನೀರಿನ ಹರಿವನ್ನು ನಿಲ್ಲಿಸಲಾಗುತ್ತಿದೆ.
“ಆಲಮಟ್ಟಿ ಜಲಾಶಯ ವ್ಯಾಪ್ತಿಯ 169 ಕೆರೆಗಳಿಗೆ ವರ್ಷದಲ್ಲಿ ಎರಡು ಬಾರಿ ನೀರು ಹರಿಸಲಾಗುತ್ತದೆ. ಈಗಾಗಲೇ ಬಹುತೇಕ ಕೆರೆಗಳ ಸಾಮರ್ಥ್ಯದ ಶೇ.50 ರಷ್ಟು ಭರ್ತಿಯಾಗಿವೆ” ಎಂದು ಆಲಮಟ್ಟಿ ನೀರಾವರಿ ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.
“ಕೆರೆಗಳ ಭರ್ತಿಗೆ ಬೇಡಿಕೆ ಬಂದರೆ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಅನುಮತಿಗಾಗಿ ಪತ್ರ ಬರೆಯಲಾಗುವುದು. ಕೆರೆಗಳ ಭರ್ತಿಗಾಗಿ 2 ಟಿಎಂಸಿ ಅಡಿಯಷ್ಟು ನೀರು ಕಾಯ್ದಿರಿಸಲಾಗಿದೆ. ಅಗತ್ಯ ಎನಿಸಿದರೆ ಹಾಗೂ ಅನುಮತಿ ದೊರೆತರೆ ಕೆರೆಗಳ ಭರ್ತಿಗಾಗಿ ನೀರು ಹರಿಸುತ್ತೇವೆ” ಎಂದು ಅವರು ತಿಳಿಸಿದರು.
“ಕಲಬುರ್ಗಿ, ಜೇವರ್ಗಿ, ಸಿಂದಗಿ, ಇಂಡಿ, ಲಿಂಗಸೂರು ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ಆಲಮಟ್ಟಿಯಿಂದ ನೀರು ಒದಗಿಸಲಾಗುತ್ತದೆ. ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರ, ಗೂಗಲ್ ಬ್ಯಾರೇಜ್ಗೂ ಬೇಸಿಗೆಯ ಬಳಕೆಗೆ ನೀರು ಮೀಸಲಿಡಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಭೂಗಳ್ಳರ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಆಕ್ರೋಶ
519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಸದ್ಯ 509.75 ಮೀ.ವರೆಗೆ ನೀರು ಸಂಗ್ರಹವಿದೆ. ಜಲಾಶಯದಲ್ಲಿ 28.708 ಟಿಎಂಸಿ ಅಡಿ ನೀರು ಸಂಗ್ರಹವಿದ್ದರೂ, 11.088 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ (ಲೈವ್ ಸ್ಟೋರೇಜ್) ಲಭ್ಯವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 17 ಟಿಎಂಸಿ ಅಡಿಯಷ್ಟು ಕಡಿಮೆ ನೀರು ಸಂಗ್ರಹವಿದೆ.
ಕಾಲುವೆಗಳ ಜಾಲದ ದುರಸ್ತಿ ಹಾಗೂ ನಿರ್ವಹಣೆಯ ಕ್ಲೋಸರ್ ಕಾಮಗಾರಿ ಈ ವರ್ಷ ನಡೆಯುವುದು ಅನುಮಾನ ಎನ್ನಲಾಗಿದೆ. ಸದ್ಯ ಚುನಾವಣೆ ನೀತಿ ಸಂಹಿತೆಯಿದೆ. ಯಾವುದೇ ಟೆಂಡರ್ ಕರೆಯಲು ಆಯೋಗದ ಅನುಮತಿ ಅಗತ್ಯ ಹಾಗೂ ಕ್ಲೋಸರ್ ಕಾಮಗಾರಿಗಾಗಿ ಅನುದಾನವೂ ಸದ್ಯ ಲಭ್ಯವಾಗಿಲ್ಲ ಎನ್ನಲಾಗಿದೆ.