ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾದ ಬೆಂಬಲವನ್ನು ಘೋಷಿಸಿದೆ.
ಕಾಂಗ್ರೆಸ್ ಪಕ್ಷವು ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗಿನಿಂದಲೂ ನಮ್ಮ ಸಮುದಾಯಕ್ಕೆ ಆದ್ಯತೆಯನ್ನು ಕೊಟ್ಟಿದೆ. ಹಾಗೆಯೇ ದೇಶದ ಹಲವಾರು ರಾಜ್ಯಗಳಲ್ಲಿ ನಮಗೆ ರಾಜಕೀಯ ಪ್ರಾತಿನಿಧ್ಯತೆಯನ್ನು ಕೊಡುತ್ತಿದೆ. ಮುಖ್ಯವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಶ್ರೀಮತಿ ಅಕ್ಕೈ ಪದ್ಮಶಾಲಿಯವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು, ನಮ್ಮ ಸಮುದಾಯದ ಇತರೆ ವ್ಯಕ್ತಿಗಳನ್ನು ವಿವಿಧ ಉತ್ತಮ ಸ್ಥಾನಗಳಲ್ಲಿ ನೇಮಕ ಮಾಡಿರುವುದರಿಂದ ನಾವು ಸಂಪ್ರೀತರಾಗಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರು ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಗಳ ಕುರಿತಾಗಿ ಮುಕ್ತವಾಗಿ ಮಾತನಾಡಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
“ಪಂಚ ಗ್ಯಾರಂಟಿ ಯೋಜನೆಗಳಲ್ಲಿ ನಮ್ಮನ್ನು ಒಳಗೊಂಡಿದ್ದು, ಈಗಾಗಲೇ ಶಕ್ತಿ ಯೋಜನೆಯ ಫಲವನ್ನು ಪಡೆಯುತ್ತಿದ್ದೇವೆ. ಅತಿ ಶೀಘ್ರವಾಗಿ ಗೃಹಲಕ್ಷ್ಮೀ ಯೋಜನೆಯ ಫಲವು ಕೆಲವರಿಗೆ ಸಿಗುತ್ತಿದ್ದು, ಅತಿ ಶೀಘ್ರವಾಗಿ ನಮ್ಮೆಲ್ಲರಿಗೂ ಈ ಯೋಜನೆಯ ಫಲ ಸಿಗುತ್ತದೆ ಎಂಬ ನಂಬಿಕೆ ನಮಗಿದೆ. ನಮ್ಮ ಪಿಂಚಣಿಯನ್ನು ರೂಪಾಯಿ 1200/-ಕ್ಕೆ ಹೆಚ್ಚಿಸಿದ್ದಾರೆ. ಲಿಂಗಾಧಾರಿತವಾದ ತಾರತಮ್ಯವನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ನೀಡಿದ್ದಾರೆ.LGBTQAI++( ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರು ) ಸಮುದಾಯದ ವಿವಾಹ ಮತ್ತು ದಾಂಪತ್ಯದ ಕುರಿತಾಗಿಯೂ ಆಶಾದಾಯಕವಾದ ಹೇಳಿಕೆಗಳನ್ನು ಕೊಟ್ಟಿದ್ದಾರೆ” ಎಂದು ಒಕ್ಕೂಟ ತಿಳಿಸಿದೆ.
ಮುಖ್ಯವಾಗಿ ದೇಶವನ್ನು ಧರ್ಮಾಧಾರಿತವಲ್ಲದೆ ಸರ್ವರಿಗೂ ನಾಗರಿಕ ಹಕ್ಕುಗಳನ್ನು ಕೊಡಮಾಡಿರುವ ಸಂವಿಧಾನ ಮತ್ತು ಸಂವಿಧಾನಾತ್ಮಕ ನೈತಿಕತೆಯ ಆಧಾರದ ಮೇಲೆ ಮುನ್ನಡೆಸಿ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಭಾರತವನ್ನು ಪುನರ್ ನಿರ್ಮಾಣ ಮಾಡುತ್ತಾರೆಂಬ ಹೆಗ್ಗನಸು ನಮ್ಮದು. ಹಾಗೆಯೇ ಕಾಂಗ್ರೆಸ್ ಪಕ್ಷದ ನೇತೃತ್ವದ ಕರ್ನಾಟಕ ರಾಜ್ಯದ ಸರ್ಕಾರವು ಶೋಷಿತ ಸಮುದಾಯಗಳ, ಅಲ್ಪಸಂಖ್ಯಾತ ಸಮುದಾಯಗಳ,ಮಹಿಳೆಯರ, ಯುವಕರ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟವು ತಿಳಿಸಿದೆ.
ಇದನ್ನು ಓದಿದ್ದೀರಾ? ದ.ಕನ್ನಡ | ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ ಸಹಿಸಲು ಸಾಧ್ಯವೇ? ಬಿಜೆಪಿಗೆ ಮತ ಹಾಕಲು ‘ಬಂಟ ಬ್ರಿಗೇಡ್’ ಹೆಸರಲ್ಲಿ ಕರಪತ್ರ!
ಒಕ್ಕೂಟದ ಮಾಳವಿಕ, ಪ್ರಕಾಶ್ ರಾಜ್, ಭೀಮಯ್ಯ , ಬೀರಲಿಂಗ, ಪೆದ್ದಣ್ಣ, ನಿತ್ಯಾನಂದ,ಸಂಜೀವನಿ, ಮಹಮ್ಮದ್ ಸೈಫುಲ್ಲಾ, ಕೃಷ್ಣಮೂರ್ತಿ, ಆದಿತ್ಯ, ಸಮೀರ್, ನಿವೇದಿತಾ, ಅಬಿದಾ ಬೇಗಮ್, ಪೂಜಿತಾ ಅವರು ತಮ್ಮ ಬೆಂಬಲವು ಕಾಂಗ್ರೆಸ್ ಪಕ್ಷಕ್ಕೆ ಎಂದು ತಿಳಿಸಿದ್ದಾರೆ.