ಅಪ್ಪು ಹೆಸರಲ್ಲಿ ಸೋಮಣ್ಣ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದ ಪ್ರತಾಪ್ ಸಿಂಹ
ಕಮಿಷನ್ ಎಷ್ಟು ತೆಗೆದುಕೊಂಡಿದ್ದಾರೆ ಕೇಳಿ ಎಂದ ಅಭಿಮಾನಿಗಳು
ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್ಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ವರುಣಾ ಕ್ಷೇತ್ರದಲ್ಲಿ ಗುರುವಾರ ಭರ್ಜರಿ ಪ್ರಚಾರ ನಡೆಸುತ್ತಲೇ, ಅವರ ಸಹೋದರ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಎಳೆದು ತಂದು ರಾಜಕೀಯ ಮಾಡಲು ಯತ್ನಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಣ್ಣ, ಸಿದ್ದರಾಮಯ್ಯ ಪರ ರೋಡ್ ಶೋದಲ್ಲಿ ಭಾಗಿಯಾಗಿರುವ ಸಂದರ್ಭದ ಫೋಟೋ ಮತ್ತು ಬೆಂಗಳೂರಿನಲ್ಲಿ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಕಟ್ಟಿಸಿದ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆಯ ಸಂದರ್ಭದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಸಿದ್ದರಾಮಯ್ಯನವರ ಎದುರಾಳಿ, ಸಚಿವ ವಿ. ಸೋಮಣ್ಣನವರನ್ನು ಹೋಗಳಿದ ಹಳೆಯ ವಿಡಿಯೋ ಎರಡನ್ನೂ ಹಂಚಿಕೊಂಡು, “ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ. ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ” ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ಪ್ರತಾಪ್ ಸಿಂಹ ಅವರ ಈ ರಾಜಕೀಯ ಪ್ರೇರಿತ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್, “ನಿಮ್ಮ ಹೊಲಸು ರಾಜಕಾರಣಕ್ಕೆ ನಮ್ಮೆಲ್ಲರ ʼಅಪ್ಪುʼ ಅವರನ್ನು ಯಾಕೆ ಎಳೆಯುತ್ತೀರಿ ಪ್ರತಾಪ್ ಸಿಂಹ್ ಅವರೇ? ಛೀ..ಛೀ.. ಇದು ತುಂಬಾ ದೊಡ್ಡ ತಪ್ಪು, ಈ ತಪ್ಪನ್ನು ಮಾಡಬೇಡಿ” ಎಂದು ಎಚ್ಚರಿಸಿದ್ದಾರೆ.
ಕೇವಲ ಪ್ರಕಾಶ್ ರಾಜ್ ಮಾತ್ರವಲ್ಲ, ರಾಜ್ ಕಟುಂಬದ ಅಭಿಮಾನಿಗಳು ಕೂಡ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಮುನಿಯಪ್ಪ ಎಂಬುವವರು ಟ್ವೀಟ್ ಮಾಡಿ, “ದೊಡ್ಮನೆ ಬಗ್ಗೆ ಮಾತನಾಡುವಾಗ ಹಾಗೂ ಶಿವರಾಜ್ ಕುಮಾರ್ ಅವರ ವಿಚಾರದಲ್ಲಿ ಜವಾಬ್ದಾರಿ ಇರಲಿ. ಇಲ್ಲವಾದರೆ ನಿಮ್ಮ ರಾಜಕೀಯ ಜೀವನ ಕುಂಠಿತವಾಗುತ್ತದೆ. ಆಸ್ಪತ್ರೆ ಕಟ್ಟಿಸಿದ್ದು ಪಕ್ಷದ ಹಣದಲ್ಲಲ್ಲ. ಇದರಲ್ಲಿ ಕಮಿಷನ್ ಎಷ್ಟು ತೆಗೆದುಕೊಂಡರು ಎಂದು ಸಚಿವರನ್ನು ಕೇಳಿ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಕಾಶ್ ಪಾಟೀಲ್ ಎಂಬುವವರು ಟ್ವೀಟ್ ಮಾಡಿ, “ಅಲ್ರಯ್ಯ ಅಪ್ಪು ಅವರ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ್ದು ಈ ರೀತಿ ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಳ್ಳಲಿಕ್ಕಾ? ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಟ್ವಿಟರ್ ಬಳಕೆದಾರ ರವಿ ಎಂಬುವವರು ಪ್ರತಿಕ್ರಿಯಿಸಿದ್ದು, “ಸೋಮಣ್ಣ ಏನು ಅವರ ಮನೆಯ ದುಡ್ಡಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರಾ? ನಿಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೆ ಅಣ್ಣ ತಮ್ಮಂದಿರ ಮಧ್ಯೆ ಹುಳಿ ಹಿಂಡುವ ಕೆಲಸ ಯಾಕೆ ಮಾಡ್ತೀರಿ” ಎಂದು ಕಿಡಿ ಕಾರಿದ್ದಾರೆ.
ಕೆಲವರು, “ನಿಮ್ಮ ನೀಚ ರಾಜಕೀಯಕ್ಕೆ ಅಪ್ಪು ಹೆಸರನ್ನು ಬಳಸಬೇಡಿ” ಎಂದರೆ, ಇನ್ನು ಕೆಲವರು, “ಈ ಮಾತನ್ನು ಹೇಳಿ ವರುಣಾದಲ್ಲಿ ಸೋಮಣ್ಣನವರ ಗೆಲುವುವಿಗೆ ಎಳ್ಳುನೀರು ಬಿಟ್ಟ ಪ್ರತಾಪಣ್ಣ” ಎಂದು ವ್ಯಂಗ್ಯಮಯವಾಗಿ ಟ್ವೀಟ್ ಮಾಡಿದ್ದಾರೆ.