ಪ್ರಸ್ತುತ ವರ್ಷದ ವಿಧಾನಸಭಾ ಚುನಾವಣೆಯನ್ನು ನಾವೆಲ್ಲ ಒಮ್ಮತದಿಂದ ಎದುರಿಸಬೇಕಾಗಿದೆ. ಬಿಜೆಪಿ 40% ಕಮಿಷನ್ ಭ್ರಷ್ಟ ಸರ್ಕಾರವಾಗಿದ್ದು, ಕೇವಲ ರಾಜ್ಯದಲ್ಲಿ ಅಲ್ಲದೆ ದೇಶಾದ್ಯಂತ ಸುದ್ದಿ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, “ಚುನಾವಣೆಯಲ್ಲಿ ಶ್ರೀಧರ್ ಗೌಡರನ್ನು ಗೆಲ್ಲಿಸಿ. ಈ ಚುನಾವಣೆಯಲ್ಲಿ ನಮ್ಮ ನಾಡಿನ ರೈತರ ಬದುಕು ಯುವಜನರ, ತಾಯಂದಿರ ಬದುಕು ಹಸನಾಗಬೇಕಾದರೆ ನಮ್ಮ ಕಾಂಗ್ರೆಸ್ಸನ್ನು ಗೆಲ್ಲಿಸಲೇ ಬೇಕಾಗಿದೆ ಎಂಬ ಡಿಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ಅವರ ಮನವಿ ಮೇರೆಗೆ ಬಂದಿದ್ದೇನೆ” ಎಂದರು.
“ನಾವು ಭಾರತ್ ಜೋಡೋ ಅಂದರೆ ಬಿಜೆಪಿಯವರು ಭಾರತ್ ತೋಡು ಎನ್ನುತ್ತೀರಿ. ಈ ದೇಶದ ಬಗ್ಗೆ ದೇಶಭಿಮಾನ ಗೌರವ ನಮಗೂ ಇದೆ. ಬರೀ ಬಿಜೆಪಿಗೆ ಮಾತ್ರ ಇಲ್ಲ” ಎಂದರು.
“ಪ್ರಜಾಪ್ರಭುತ್ವದಲ್ಲಿ ನಮಗೆ ಎಲ್ಲ ರೀತಿಯ ಹಕ್ಕು ಕೊಟ್ಟಿದೆ. ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತೀರಾ, ಬಗಲ್ ಮೆ ಚೂರಿ ಹಾಕುತ್ತೀರಾ. ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ದಂಧೆ ಮಾಡುತ್ತೀರಿ. ಎಲ್ಲ ಅಗತ್ಯ ವಸ್ತುಗಳ ಮೇಲೆಯೂ ಜಿಎಸ್ಟಿ ಹಾಕಿದ್ದೀರಿ. ಬಿಟ್ಟರೆ ಉಸಿರಾಡುವ ಗಾಳಿಗೂ ಜಿಎಸ್ಟಿ ಹಾಕುತ್ತೀರಿ” ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
“ರೈತರ ಹಿತ ಕಾಪಾಡುತ್ತೇವೆಂದು ಹೇಳಿ ಕೃಷಿ ವಸ್ತುಗಳ ಬೆಲೆ ಏರಿಕೆ ಮಾಡಿ ಉತ್ಪಾದನೆ ಕುಂಠಿತ ಮಾಡಿದ್ದೀರಿ ಪ್ರತಿಯೊಬ್ಬರಿಗೂ ನೌಕರಿ ನೀಡುತ್ತೇವೆಂದು ಹೇಳಿ ಯುವಕರನ್ನು ದಾರಿ ತಪ್ಪಿಸಿದ್ದು, ಜನಸಾಮಾನ್ಯರ ಖಾತೆಗೆ ₹15 ಲಕ್ಷ ಹಣ ಹಾಕುತ್ತೇವೆಂದು ನಾಮ ಹಾಕಿದ್ದೀರಿ” ಎಂದು ಛೀಮಾರಿ ಹಾಕಿದರು.
“ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ₹410ಕ್ಕೆ ಅಡುಗೆ ಗ್ಯಾಸ್ ಸಿಲಿಂಡರ್ ಕೊಡುತ್ತಿದ್ದೆವು. ಬಿಜೆಪಿ ಬಂದು ₹1,300 ಮಾಡಿದ್ದೀರಿ. ನಮ್ಮಿಂದ ನಿಮ್ಮಿಂದ ಮೀಸಲಾತಿ ಸಿಗುತ್ತಿಲ್ಲ, ಅದನ್ನು ಅಂಬೇಡ್ಕರ್ ಅವರು ಜನಸಂಖ್ಯೆ ಆಧಾರದ ಮೇಲೆ ಅಂದೇ ಕೊಟ್ಟಿದ್ದಾರೆ. ಸಂವಿದಾನಕ್ಕೆ ಧಕ್ಕೆ ತಂದರೆ ನೀವು ಉಳಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, “ನನ್ನ ರಾಜಕೀಯ ಅನುಭವದಲ್ಲಿ ಇದೊಂದು ದೊಡ್ಡ ಸಭೆ. ಈ ಸಭೆ ಕನಕಪುರದಲ್ಲಿ ನೋಡಿದ ಹಾಗಿದೆ. ಮರಕ್ಕೆ ಬೇರು ಹೇಗೆ ಮುಖ್ಯವೊ, ಹಾಗೆಯೇ ನಂಬಿಕೆ ಎನ್ನುವುದೂ ಮುಖ್ಯ. ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲು ಆಗುವುದಿಲ್ಲ” ಎಂದು ಹೇಳಿದರು.
“ಕಳೆದ 30 ವರ್ಷದಿಂದ ಎ ಟಿ ರಾಮಸ್ವಾಮಿ ಮತ್ತು ಎ ಮಂಜು ಅವರನ್ನು ಗೆಲ್ಲಿಸಿದ್ದೀರಿ ಅರಕಲಗೂಡು ಬದಲಾವಣೆ ಆಗಿದಿಯಾ? ರಾಮಸ್ವಾಮಿ ಅವರು ಜನರ ಮನಸ್ಸನ್ನು ಗೆಲ್ಲುವಲ್ಲಿ ವಿಫಲರಾದರು. ಇನ್ನು ಮಂಜಣ್ಣ ಅವರನ್ನು ನಮ್ಮ ಪಕ್ಷ ಮಂತ್ರಿ ಮಾಡಿತು. ಆದೆರೆ, ಕಮಲ ಹಿಡಿದು ಹೊರಟರು. ರೇವಣ್ಣನ ಮಗನಿಗೆ ಕೇಸು ಹಾಕಿದರು ಅಂತ ಈಗ ಇಬ್ಬರೂ ಒಂದಾಗಿದ್ದಾರೆ. ಕೊರೊನಾ ವೇಳೆ ಇವರಿಬ್ಬರೂ ಇರಲಿಲ್ಲ. ಸಾಮಾನ್ಯ ಶ್ರೀಧರ್ ಗೌಡ ಜನರ ಮಧ್ಯೆ ಇದ್ದರು” ಎಂದು ಹೇಳಿದರು.
“ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂದು ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡಿದರೆ, ಅವರೂ ಬಿಜೆಪಿ ಜೊತೆ ಹೋದರು. ಬಿಜೆಪಿ ಬಂದು ಬೆಲೆ ಏರಿಕೆ ಆಯಿತು. ಈಗ ಅಮುಲ್ ಬಂದು ನಮ್ಮ ನಂದಿನಿ ಏನಾಯ್ತು? ಇದನ್ನು ರೇವಣ್ಣನನ್ನೇ ಕೇಳಬೇಕು” ಎಂದರು.
“ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ಬೂಸ ಬೆಲೆ ಕಡಿಮೆ ಆಗಿಲ್ಲ. ರೈತರು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ನಿಮ್ಮ ಸಹಕಾರದಿಂದ ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಜಾರಿ ಮಾಡಲಾಗುವುದು” ಎಂದು ತಿಳಿಸಿದರು.
“ಪ್ರತಿ ಮನೆಯಲ್ಲೂ ಜ್ಯೋತಿ ಬೆಳಗಬೇಕು. ಹಾಗಾಗಿ ಉಚಿತ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೊಮ್ಮೆ ₹2,000 ಗೃಹಲಕ್ಷ್ಮಿ ಯೋಜನೆ, ಉಚಿತ ಪ್ರಯಾಣ, ತಿಂಗಳಿಗೆ ತಲಾ 10 ಕೆಜಿ ಅನ್ನ ಬಾಗ್ಯ, ಉದ್ಯೋಗಕ್ಕಾಗಿ ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಪದವೀಧರರಿಗೆ ತಿಂಗಳಿಗೆ ₹3,000, ಡಿಪ್ಲೊಮೊದಾರರಿಗೆ ₹1,500 ನೀಡಲಾಗುವುದು” ಎಂದು ಕಾಂಗ್ರೆಸ್ ಗ್ಯಾರಂಟಿ ಕುರಿತು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಲಂಚ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೆಆರ್ಎಸ್ ಗೆಲ್ಲಿಸಿ: ರವಿ ಕೃಷ್ಣಾರೆಡ್ಡಿ
“ಸಿದ್ದರಾಮಯ್ಯ, ಖರ್ಗೆ, ನಾನು ಎಲ್ಲ ಸೇರಿ ಶ್ರೀಧರ್ ಗೌಡನನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದೇವೆ. ಕೃಷ್ಣೇಗೌಡನಿಗೆ ಎರಡು ವರ್ಷಗಳ ಹಿಂದೆಯೇ ಪಕ್ಷಕ್ಕೆ ಬಾ ಎಂದರೂ ಬರಲಿಲ್ಲ. ಈಗ ಬಂದರೆ ಆಗುತ್ತದೆಯಾ? ಈಗ ಕೃಷ್ಣೇಗೌಡರ ಮಾತಿಗೆ ಮರುಳಾಗಬೇಡಿ, ಶ್ರೀಧರ್ ಗೌಡರಿಗೆ ಮತ ನೀಡಿ ಗೆಲ್ಲಿಸಿ ಮತ್ತೆ ನಾನು ಬರುತ್ತೇನೆ ನಿಮ್ಮ ಋಣ ತೀರಿಸುತ್ತೇನೆ” ಎಂದರು.
“ಎ ಟಿ ರಾಮಸ್ವಾಮಿ ಕಮಲದ ಹಿಂದೆ ಹೋಗಿದ್ದಾರೆ. ಕಮಲ ಕೆರೆಯಲ್ಲಿ ಇರಬೇಕು. ಮಂಜಣ್ಣ ಹೊಲದಲ್ಲಿ ಇರಬೇಕು. ದಾನಧರ್ಮ ಮಾಡುವ ಶ್ರೀಧರ್ ಗೌಡನ ಕೈ ಸದಾ ನಿಮ್ಮ ಜೊತೆ ಇರಬೇಕು. ಆದ್ದರಿಂದ ಶ್ರೀಧರ್ ಗೌಡನನ್ನು ಗೆಲ್ಲಿಸಿ ಕಾಂಗ್ರೆಸ್ ಕೈ ಬಲಪಡಿಸಿ” ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಗೆವಾಳು ದ್ಯಾವಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.