ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಅನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಹಾಳುಗೆಡವುತ್ತಿದ್ದಾರೆ ಎಂದು ಶ್ರೀಲಂಕಾದ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಆರೋಪಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, “ಜಯ್ ಶಾ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ನಿಯಂತ್ರಿಸುತ್ತಿದ್ದಾರೆ. ಅವರ ಒತ್ತಡದಿಂದಾಗಿ ಮಂಡಳಿ ಹಾಳಾಗುತ್ತಿದೆ. ಭಾರತದಲ್ಲಿನ ಒಬ್ಬ ವ್ಯಕ್ತಿ ಶ್ರೀಲಂಕಾ ಕ್ರಿಕೆಟ್ ಅನ್ನು ಹಾಳು ಮಾಡುತ್ತಿದ್ದಾನೆ. ಭಾರತದ ಗೃಹ ಸಚಿವರಾಗಿರುವ ಅವರ ತಂದೆಯ ಕಾರಣದಿಂದಾಗಿ ಅವರು ಪ್ರಭಾವಿಗಳಾಗಿದ್ದಾರೆ” ಎಂದು ಅರ್ಜುನ ರಣತುಂಗ ತಿಳಿಸಿದ್ದಾರೆ.
Jay Shah responsible for ruining SLC – Arjuna#dailymirror #SriLanka https://t.co/sAPsnhpocs
— DailyMirror (@Dailymirror_SL) November 12, 2023
“ಶ್ರೀಲಂಕಾ ಮಂಡಳಿಯ ಅಧಿಕಾರಿಗಳು ಜಯ್ ಶಾ ಅವರ ಪ್ರಭಾವಕ್ಕೆ ಒಳಗಾಗಿದ್ದು, ಮಂಡಳಿಯನ್ನು ಹಾಳು ಮಾಡಿ ನಿಯಂತ್ರಿಸಬಹುದು. ನಮ್ಮ ಮಂಡಳಿ ಏಕೆ ಹೀಗಾಯಿತು. ಇದಕ್ಕೆ ಕಾರಣರಾದ ಎಲ್ಲರನ್ನೂ ತನಿಖೆಯ ಮೂಲಕ ಬಹಿರಂಗಪಡಿಸಬೇಕಿದೆ. ವ್ಯಕ್ತಿಗತವಾಗಿ ದೇಶಕ್ಕೆ ದ್ರೋಹ ಮಾಡುವವರನ್ನು ಮಂಡಳಿಯ ಅಧ್ಯಕ್ಷರು ಸರಿಯಾದ ತನಿಖೆ ನಡೆಸುವ ಮೂಲಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮಂಡಳಿಯನ್ನು ಸ್ವಚ್ಛಗೊಳಿಸಲು ಸೂಕ್ತ ಸಮಯ ಇದಾಗಿದೆ” ಎಂದು ರಣತುಂಗ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಯವಿಟ್ಟು ಬಿಟ್ಟುಬಿಡಿ, ನನಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ ಎಂದು ಅಂಗಲಾಚಿದರೂ ಅತ್ಯಾಚಾರವೆಸಗಿದ ರಾಕ್ಷಸರು
ತನ್ನ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸಲು ವಿಫಲವಾದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶ್ರೀಲಂಕಾ ಮಂಡಳಿಯನ್ನು(ಎಸ್ಎಲ್ಸಿ) ಅಮಾನತುಗೊಳಿಸಿದ ಕೆಲವು ದಿನಗಳ ನಂತರ ರಣತುಂಗ ಹೇಳಿಕೆ ನೀಡಿದ್ದಾರೆ.
ಅರ್ಜುನ ರಣತುಂಗ 1996ರಲ್ಲಿ ಶ್ರೀಲಂಕಾ ವಿಶ್ವಕಪ್ ಮುಡಿಗೇರಿಸಿಕೊಂಡಾಗ ನಾಯಕರಾಗಿದ್ದರು. ಅವರ ಸಾರಥ್ಯದಲ್ಲಿ ತಂಡವು ಹಲವು ವರ್ಷಗಳ ಕಾಲ ಅತ್ಯಂತ ಬಲಿಷ್ಠವಾಗಿತ್ತು.
ಅದಕ್ಕೂ ಮೊದಲು, ಶ್ರೀಲಂಕಾ ಸಂಸತ್ತು ‘ಭ್ರಷ್ಟ ಎಸ್ಎಲ್ಸಿ ಆಡಳಿತ ಮಂಡಳಿಯನ್ನು ವಜಾಗೊಳಿಸಲು ಕರೆ ನೀಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು. ಐಸಿಸಿ ಇದನ್ನು ರಾಜಕೀಯ ಹಸ್ತಕ್ಷೇಪ ಎಂದು ಪರಿಗಣಿಸಿ ಮಂಡಳಿಯನ್ನು ಅಮಾನತುಗೊಳಿಸಿದೆ.
ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ. ನವೆಂಬರ್ 21 ರಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಸಭೆಯ ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಐಸಿಸಿ ಸಂಘಟಿಸುವ ಯಾವುದೇ ಟೂರ್ನಿಯಲ್ಲಿ ಶ್ರೀಲಂಕಾ ಭಾಗವಹಿಸಲು ಅವಕಾಶ ಇಲ್ಲ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ 9 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4 ಅಂಕ ಪಡೆದುಕೊಂಡಿತ್ತು. ಬ್ಯಾಟಿಂಗ್ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್ನಿಂದಾಗಿ ವಿಶ್ವಕಪ್ನಲ್ಲಿ ಸೋಲು ಅನುಭವಿಸಿದೆ.