- ದೇಶಾದ್ಯಂತ ಪ್ರತಿಭಟನೆಯ ಎಚ್ಚರಿಕೆ
- ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು, ಕ್ರೀಡಾಪಟುಗಳು ಈಗಾಗಲೇ ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಕುಸ್ತಿಪಟುಗಳ ಪರ ನಿಂತಿರುವ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆ, ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರಕ್ಕೆ ಜೂನ್ 9ರ ಗಡುವು ನೀಡಿದೆ.
ʻಆರೋಪಿ ಸ್ಥಾನದಲ್ಲಿರುವ ಬ್ರಿಜ್ ಭೂಷಣ್ ಸಿಂಗ್ ಬಂಧನವಾಗದ ಹೊರತು ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲʼ ಎಂದಿರುವ ರೈತ ಸಂಘಟನೆಗಳು, ಜೂನ್ 9ರೊಳಗೆ ಸಿಂಗ್ ಬಂಧಿಸದಿದ್ದರೆ, ಖಾಪ್ ಪಂಚಾಯತ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ.
ಜೂನ್ 9ರಿಂದ ರೈತ ಸಂಘಟನೆಗಳನ್ನು ಒಗ್ಗೂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಚಳವಳಿ ದೇಶಾದ್ಯಂತ ನಡೆಯಲಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ದೇಶಾದ್ಯಂತ ಖಾಪ್ ಪಂಚಾಯತ್ ಹೋರಾಟದ ರೂಪುರೇಶೆ ಸಿದ್ದಪಡಿಸಲು ರೈತ ಸಂಘಟನೆ ಕೆಲ ಸಮಿತಿಗಳನ್ನು ರಚಿಸಿವೆ.
ʻನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ವಿರುದ್ಧ ದಾಖಲಾಗಿರುವ ಎಲ್ಲಾ ದೂರುಗಳನ್ನು ತಕ್ಷಣವೇ ಕೈ ಬಿಡಬೇಕುʼ ಎಂದು ಟಿಕಾಯತ್ ಒತ್ತಾಯಿಸಿದ್ದಾರೆ.
ಗಂಗಾ ನದಿಗೆ ಪದಕ ಎಸೆಯಲು ನಿರ್ಧರಿಸಿದ್ದ ಕುಸ್ತಿಪಟುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಕಿಸಾನ್ ಯೂನಿಯನ್ ಸಂಘಟನೆಯ ನರೇಶ್ ಟಿಕಾಯತ್, ಪದಕಗಳನ್ನು ತಮ್ಮ ವಶಕ್ಕೆ ಪಡೆದು, ಸಮಸ್ಯೆ ಪರಿಹಾರಕ್ಕೆ ʻಐದು ದಿನಗಳ ಸಮಯವನ್ನು ಕೊಡಿʼ ಎಂದು ಕುಸ್ತಿಪಟುಗಳಲ್ಲಿ ಮನವಿ ಮಾಡಿದ್ದರು.