ಮುಂಬಯಿ ಕರ್ನಾಟಕ ಪ್ರದೇಶದ ಇಂಡಿ ಉಪ – ವಿಭಾಗದ ತಾಲೂಕುಗಳು ಮತ್ತು ಮುದ್ದೇಬಿಹಾಳ ಹೈದರಾಬಾದ ಕರ್ನಾಟಕದ ಅನುಚ್ಛೆದ 371ನೇ (ಜೆ) ವಿಶೇಷ ಸ್ಥಾನಮಾನದಲ್ಲಿ ಸೇರಿಸಬೇಕೆಂದು ಮುಂಬಯಿ ಕರ್ನಾಟಕದ ನಾಯಕರು ಹಿಂದೆ ನಿಂತು ನಡೆಸುತ್ತಿರುವ ಸಂಚಿಕೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತ್ರೀವವಾಗಿ ಖಂಡಿಸಿದೆ.
“ಪ್ರಸ್ತುತ ಹೈದರಾಬಾದ್ ಕರ್ನಾಟಕ ಪ್ರದೇಶದ ವಿಶೇಷ ಸ್ಥಾನಮಾನದ ವ್ಯಾಪ್ತಿಯಲ್ಲಿ ಒಂದೇ ಒಂದು ಗ್ರಾಮ ಸೇರಿಸಲು ಸಾಧ್ಯವಿಲ್ಲ. ಸೇರ್ಪಡೆಗೆ ನಾವು ಅವಕಾಶ ನೀಡುವುದಿಲ್ಲ, ಬೇಕಾದರೆ ಮುಂಬಯಿ ಕರ್ನಾಟಕದವರು ವಿಶೇಷ ಸ್ಥಾನಮಾನ ಬೇಡಿಕೆಯಿಟ್ಟು ಹೋರಾಟ ನಡೆಸಿ ಪ್ರತ್ಯೇಕವಾಗಿ ತಮ್ಮ ಭಾಗಕ್ಕೆ ವಿಶೇಷ ಸ್ಥಾನಮಾನ ಪಡೆಯಲು ನಮ್ಮ ಅಭ್ಯಂತರವಿಲ್ಲ, ಆದರೆ ನಮ್ಮ ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನದ ವ್ಯಾಪ್ತಿಯಲ್ಲಿ ಸೇರಲು ಯತ್ನಿಸಿದರೆ ನಾವು ಬಿಡುವುದಿಲ್ಲ. ಇದಕ್ಕಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
“ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371ನೇ (ಜೆ) ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಬೇಕೆಂದು ದಶಕಗಳಿಂದ ನಡೆಸಿದ ನಿರಂತರ ಹೋರಾಟ ಹಾಗೂ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ಮೂಲಕ ವಿಶೇಷ ಸ್ಥಾನಮಾನ ಪಡೆದ್ದಿದ್ದೇವೆ. ಈ ರಚನಾತ್ಮಕ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸುವಾಗ ಕನಿಷ್ಠ ಸೌಜನ್ಯಕ್ಕಾದರೂ ನೈತಿಕ ಬೆಂಬಲ ನೀಡದ ಮುಂಬಯಿ ಕರ್ನಾಟಕದವರು ಇದೀಗ ರೇಡಿಮೇಡ್ ಫಲ ಬೇಕೆಂಬುವುದು ಹಾಸ್ಯಾಸ್ಪದ ಸಂಗತಿಯಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸ ರೊಟ್ಟಿಯನು ಹೆಂಚಿಗೆ ಹಾಕಿದ ಮಿಜೋ ಮತದಾರರು
“ಮುಂಬಯ ಕರ್ನಾಟಕದವರು ಹೆ-ಕ ಭಾಗಕ್ಕೆ ದಕ್ಕಿದ 371ನೇ (ಜೆ) ಕಾನೂನು ಸಹ ಇದಕ್ಕೆ ಅವಕಾಶ ನೀಡುವುದಿಲ್ಲ. ಇಷ್ಟಾದರೂ ಏನೇ ಕುತಂತ್ರ ಮಾಡಿದರೆ ನಾವು ಸುಮ್ಮನೆ ಕೂಡುವುದಿಲ್ಲ” ಎಂದು ಲಕ್ಷ್ಮಣ ದಸ್ತಿ ಬಲವಾಗಿ ಎಚ್ಚರಿಕೆ ನೀಡಿದ್ದಾರೆ.