ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಕೇಜ್ರಿವಾಲ್ ಬಂಧನದ ಬಗ್ಗೆ ಭವಿಷ್ಯ ನುಡಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ “ಚುನಾವಣೆ ಬರುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗುತ್ತದೆ” ಎಂದು ಬಿಹಾರ, ಜಮ್ಮು ಮತ್ತು ಕಾಶ್ಮೀರ, ಗೋವಾ ಮತ್ತು ಮೇಘಾಲಯ ರಾಜ್ಯಗಳ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿರುವುದು ಕಂಡುಬಂದಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಯಲವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಅದಾದ ಬೆನ್ನಲ್ಲೇ ಸತ್ಯಪಾಲ್ ಮಲಿಕ್ ತನ್ನ ಹಳೆಯ ಸಂದರ್ಶನದ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
मैंने आज़ से लगभग 10 महीने पहले @DrSarvapriya को दिए एक इंटरव्यू में बता दिया था कि ये मोदी सरकार अरविंद केजरीवाल को चुनाव से पहले गिरफ्तार करेंगी।
गद्दी पर बैठा तानाशाह डरपोक आदमी है, जो देश की सरकारी एजेंसियों का ग़लत इस्तेमाल कर रहा है।
आज़ दिल्ली के मुख्यमंत्री अरविंद… pic.twitter.com/1QQLxXl4wL— Satyapal Malik 🇮🇳 (@SatyapalmalikG) March 21, 2024
ಈ ವಿಡಿಯೋದಲ್ಲಿ 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗುವುದು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಬಿಬಿಸಿಗೆ ನೀಡಿದ ಈ ಸಂದರ್ಶನದಲ್ಲಿ “ಲೋಕಸಭೆ ಚುನಾವಣೆಗೂ ಮುನ್ನ ಕೇಜ್ರಿವಾಲ್ ಬಂಧನ ಶೇಕಡ 100ರಷ್ಟು ಖಚಿತ” ಎಂದು ಮಲಿಕ್ ತಿಳಿಸಿದ್ದಾರೆ.
ಈ ವಿಡಿಯೋವನ್ನು ಎಕ್ಸ್ನಲ್ಲಿ (ಟ್ವಿಟ್ಟರ್) ಹಂಚಿಕೊಂಡಿರುವ ಸತ್ಯಪಾಲ್ ಮಲಿಕ್ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ನಾನು ಹತ್ತು ತಿಂಗಳ ಹಿಂದೆಯೇ ಈ ಮೋದಿ ಸರ್ಕಾರವು ಚುನಾವಣೆಗೂ ಮುನ್ನ ಅರವಿಂದ್ ಕೇಜ್ರಿವಾಲ್ರನ್ನು ಬಂಧಿಸಲಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದೇನೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ನೀತಿ ಪ್ರಕರಣ: ನಿರ್ದೇಶಕರ ಬಂಧನದ ಬಳಿಕ ಬಿಜೆಪಿಗೆ 30 ಕೋಟಿ ರೂ. ಚುನಾವಣಾ ಬಾಂಡ್ ನೀಡಿದ್ದ ಅರಬಿಂದೋ ಫಾರ್ಮಾ
“ಸಿಂಹಾಸನದಲ್ಲಿ ಕುಳಿತಿರುವ ಸರ್ವಾಧಿಕಾರಿ ಹೇಡಿ, ದೇಶದ ಸರ್ಕಾರಿ ಏಜೆನ್ಸಿಗಳ ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಮೋದಿ ವಿರುದ್ಧ ಕಿಡಿಕಾರಿರುವ ಮಲಿಕ್, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಬಂಧಿಸುವ ಮೂಲಕ ಇಂದು ಮೋದಿ ಸರ್ಕಾರವು ಶವದ ಪೆಟ್ಟಿಗೆ ಮೇಲೆ ತನ್ನ ಕೊನೆಯ ಮೊಳೆಯನ್ನು ಚುಚ್ಚಿದೆ” ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಿಬಿಐ ರಾಜ್ಯಪಾಲ ಸತ್ಯಪಾಲ್ ಮಲಿಕ್ಗೆ ಸೇರಿದ 30ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ ಕಾಮಗಾರಿ ಗುತ್ತಿಗೆ ನೀಡುವಾಗ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐ ಈ ದಾಳಿಯನ್ನು ನಡೆಸಿದೆ.
ಈ ಯೋಜನೆಗೆ ಸಂಬಂಧಿಸಿದ ಎರಡು ಕಡತಗಳ ವಿಲೇವಾರಿಗೆ 300 ಕೋಟಿ ರೂಪಾಯಿ ಲಂಚದ ಆಮಿಷವನ್ನು ತಮಗೆ ಒಡ್ಡಲಾಗಿತ್ತು ಎಂದು 2018ರಿಂದ 2019ರ ಅಕ್ಟೋಬರ್ 30ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಹೇಳಿದ್ದರು. ಆದರೆ ಈಗ ಅವರ ವಿರುದ್ಧವೇ ಸಿಬಿಐ ತನಿಖೆಯನ್ನು ನಡೆಸುತ್ತಿದೆ.