ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಕಾಯಂ, ಆಶಾ. ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಇಪಿಎಫ್, ಇಎಸ್ಐ ಹಾಗು ಪಿಂಚಣಿ ಸೌಲಭ್ಯ, ಕಾರ್ಮಿಕ ವಿರೋಧಿ 4 ಕಾರ್ಮಿಕ ನೀತಿಗಳನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತ್ರತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.
ಅಖಿಲ ಭಾರತ ಪ್ರತಿಭಟನಾ ಸಪ್ತಾಹ ಅಂಗವಾಗಿ ಬುಧವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನ ಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಮಾತನಾಡಿ, “ಒಳ್ಳೆಯ ದಿನಗಳನ್ನು ಕೊಡುವುದಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವು ಹಿಂದಿನ ಸರ್ಕಾರಗಳು ಅನುಸರಿಸಿದ ನೀತಿಗಳನ್ನೇ ಬಹಳ ವೇಗವಾಗಿ ಜಾರಿಗೊಳಿಸುತ್ತಾ, ಅದರಲ್ಲೂ ದುಡಿಯುವವರ ಜೀವನವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿರುವುದು ಅತ್ಯಂತ ನೋವಿನ ವಿಚಾರ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವವರು ತೀವ್ರವಾದ ಭಾದೆಗೆ ತುತ್ತಾಗಿದ್ದಾರೆ. ತ್ಯಾಗ ಬಲಿದಾನಗಳಿಂದ ಗಳಿಸಿದ ಅವರ ಎಲ್ಲಾ ಹಕ್ಕುಗಳು ಇನ್ನಿಲ್ಲವಾಗುತ್ತಿದೆ. ಖಾಯಂ ಉದ್ಯೋಗಗಳು ತೀವ್ರವಾಗಿ ಕಡಿತವಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಾರ್ವಜನಿಕ ಉದ್ಯಮಗಳನ್ನು ಜನಹಿತಕ್ಕೆ ವಿರುದ್ಧವಾಗಿ ಖಾಸಗೀಕರಿಸಲಾಗುತ್ತಿದೆ. ದುಡಿಯುವ ಜನರ ವೇತನ ಜೀವನ ವೆಚ್ಚಕ್ಕೆ ಹೋಲಿಸಿದರೆ ಕ್ಷೀಣಿಸುತ್ತಿದೆ, ಸೇವಾಭದ್ರತೆ ಮಾಯವಾಗುತ್ತಿದೆ. ಜನರ ಬೆವರು ರಕ್ತದಿಂದ ನಿರ್ಮಿಸಿದ್ದ ವಿವಿಧ ಸಾರ್ವಜನಿಕ ಕ್ಷೇತ್ರದ ಆಸ್ತಿಯನ್ನು ಯಾವುದೇ ಹೂಡಿಕೆ ಮಾಡದ ದೈತ್ಯ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು, ರೈಲ್ವೆ ಹಳಿಗಳು-ನಿಲ್ದಾಣಗಳು ಹೀಗೆ ಎಲ್ಲವನ್ನೂ ಮಾಲೀಕರಿಗೆ ಒಪ್ಪಿಸಲಾಗುತ್ತಿದೆ. ಸರ್ಕಾರವು ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆ ಜಾರಿ ಮಾಡಿ ದೇಶದ ಅಪಾರ ಸಂಪತ್ತನ್ನು ಸೃಷ್ಟಿಸುವ ಬೃಹತ್ ಉದ್ದಿಮೆಗಳನ್ನು ಅತ್ಯಂತ ಕಡಿಮೆ ಆದಾಯಕ್ಕೆ ಖಾಸಗಿಯವರಿಗೆ ಒತ್ತೆ ಇಡಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್ಗಳನ್ನು ವಿಲೀನಗೊಳಿಸುತ್ತಾ, ಖಾಸಗೀಕರಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್ ಮಾತನಾಡಿ, “ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮರ್ಜಿಗೆ ಒಳಗಾಗಿ 12 ಗಂಟೆಗಳಿಗೆ ಹೆಚ್ಚಳ ಮಾಡಿವೆ. ಐಎಲ್ಓ 144 ನೇ ಸಮಾವೇಶದ ಪ್ರಕಾರ ಸರ್ಕಾರವು, ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ತ್ರಿಪಕ್ಷೀಯ (ಸರ್ಕಾರ-ಮಾಲೀಕ-ಕಾರ್ಮಿಕ) ಸಭೆಯನ್ನು ನಡೆಸಬೇಕಾಗಿತ್ತು. ಹಲವಾರು ಬಾರಿ ನೆನಪಿಸಿದರೂ ಈ ಸರ್ಕಾರ, ಇಂತಹ
ಸಭೆಗಳನ್ನು 2015 ರಿಂದಲೂ ನಡೆಸಲಿಲ್ಲ. ಯಾವುದೇ ಚರ್ಚೆ, ಸಮಾಲೋಚನೆ ಇಲ್ಲದೇ ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ʼಕಾರ್ಮಿಕ ಸಂಹಿತೆʼ ಗಳನ್ನು ಜಾರಿಗೆ ತಂದಿದೆ” ಎಂದು ದೂರಿದರು.
“ದುಡಿಯುವ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಎಐಯುಟಿಯುಸಿ ದೇಶವ್ಯಾಪಿ ಪ್ರತಿಭಟನಾ ಸಪ್ತಾಹಕ್ಕೆ ಕರೆ ನೀಡಿರುವ ಪ್ರಯುಕ್ತ ಸಲ್ಲಿಸುತ್ತಿರುವ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರ ಕಾರ್ಮಿಕರ ಭಾರಿ
ಪ್ರತಿರೋಧ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ಜಿ.ತೆಳಿಗೇರಿಕರ್, ಶ್ರೀಕಾಂತ್, ಲಕ್ಷ್ಮಣ, ನರಸಪ್ಪ ಸಿದ್ದು, ಕುಶ, ಮಾಪಣ್ಣ, ಭಾಗಪ್ಪ, ಪುಷ್ಪಲತಾ, ಶಾಂತಮ್ಮ, ದಾನಮ್ಮ, ತಾಯಮ್ಮ, ಮಲ್ಲಮ್ಮ, ಜಯಶ್ರೀ, ಯಂಕಮ್ಮ, ಶ್ರೀದೇವಿ, ಲಾವಣ್ಯ, ಲಕ್ಷ್ಮೀ ಕಟ್ಟಿಮನಿ, ಆಶಮ್ಮ, ಮೋನಮ್ಮ ಸೇರಿದಂತೆ
ನೂರಾರು ಕಾರ್ಮಿಕರು, ಕಾರ್ಯರ್ತೆಯರು ಪಾಲ್ಗೊಂಡಿದ್ದರು.
ಹಕ್ಕೊತ್ತಾಯ:
1. ಎಲ್ಲರಿಗೂ ಖಾಯಂ ಉದ್ಯೋಗವನ್ನು ಒದಗಿಸಿ ಹಾಗೂ ಉದ್ಯೋಗದ ಹಕ್ಕುನ್ನು ಸಂವಿಧಾನದ ಮೂಲಭೂತ ಹಕ್ಕನ್ನಾಗಿಸಿ
2. ವಿದ್ಯುತ್ (ತಿದ್ದುಪಡಿ) ಮಸೂದೆ 2023 ಹಿಂಪಡೆಯಿರಿ. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ಅ ಳವಡಿಸುವುದನ್ನು ನಿಲ್ಲಿಸಿ.
3. ಎಲ್ಲಾ ಪಿಂಚಣಿದಾರರಿಗೆ ಬೆಲೆ ಸೂಚ್ಯಂಕ ಅನುಗುಣವಾದ ಪಿಂಚಣಿಯನ್ನು
ಖಾತ್ರಿಪಡಿಸಿ ಮತ್ತು ಕನಿಷ್ಠ 10 ಸಾವಿರ ರೂ. ಪಿಂಚಣಿಯನ್ನು ಒದಗಿಸಿ. ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿ.
4. ರಾಷ್ಟ್ರೀಯ ಕನಿಷ್ಠ ವೇತನವನ್ನು ತಿಂಗಳಿಗೆ 28 ಸಾವಿರ ರೂ.ಗೆ ಹೆಚ್ಚಿಸಬೇಕು.
5. ಬೆಲೆ ಏರಿಕೆಯನ್ನು ನಿಯಂತ್ರಿಸಿ ಮತ್ತು ಆಹಾರದಂತಹ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯಿರಿ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
6. ಔಷಧಗಳು, ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ಗಳ ಬೆಲೆ ಏರಿಕೆಯನ್ನು ನಿಯಂತ್ರಿಸಿ.
7. ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಿ. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಿ, ಉದ್ಯೋಗಗಳ
8. ಗುತ್ತಿಗೀಕರಣವನ್ನು ನಿಲ್ಲಿಸಿ.
9. ಸ್ಕೀಮ್ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಲು
ಐಎಲ್ಸಿಯ 45ನೇ ಮತ್ತು 46ನೇ ಶಿಫಾರಸುಗಳನ್ನು ಜಾರಿಗೊಳಿಸಿ. ಎಲ್ಲಾ ಸ್ಕೀಮ್ ಕಾರ್ಯಕರ್ತರಿಗೆ ಮಾಸಿಕ ಕನಿಷ್ಠ ವೇತನ ರೂ.28 ಸಾವಿರ ಮತ್ತು ಪಿಂಚಣಿ ರೂ.10 ಸಾವಿರ ಇಎಸ್ಐ ಮತ್ತು ಪಿಎಫ್ ಒದಗಿಸಿ.
10. ಹೊಸ ಪಿಂಚಣಿ ವ್ಯವಸ್ಥೆ (ಒಪಿಎಸ್) ಹಿಂತೆಗೆದುಕೊಳ್ಳಿ ಮತ್ತು ಪಿಂಚಣಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಹಳೆಯ ಪಿಂಚಣಿ ಯೋಜನೆಯನ್ನು (ಓಪಿಎಸ್)ನ್ನು ಪುನಃ ಜಾರಿಗೊಳಿಸುವುದು ಸೇರಿದಂತೆ 26 ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿದರು.