- ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥೆಯಿಂದ ದೂರು ದಾಖಲು
- ಕರ್ನಾಟಕ ಮೂಲದವರಾದ ಬಿ ವಿ ಶ್ರೀನಿವಾಸ್
ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ನನ್ನು ಬಂಧಿಸಲು ಅಸ್ಸಾಂ ಪೊಲೀಸರು ಕರ್ನಾಟಕಕ್ಕೆ ಧಾವಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ನಡೆಯುವ ವೇಳೆ ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅಸ್ಸಾಂನ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ ಎಂಬುವವರು ದೂರು ನೀಡಿದ್ದರು.
ಇದೇ ಆರೋಪದ ಮೇಲೆ ಅಸ್ಸಾಂ ಪೊಲೀಸರ ನಾಲ್ವರ ತಂಡವು ಶನಿವಾರ ತಡರಾತ್ರಿ ಕರ್ನಾಟಕಕ್ಕೆ ಬಂದಿದೆ ಎಂದು ಅಸ್ಸಾಂ ಡಿಜಿಪಿ ಜಿ ಪಿ ಸಿಂಗ್ ಮಾಹಿತಿ ನೀಡಿದ್ದಾರೆ.
ಅಸ್ಸಾಂನ ದಿಸ್ಪುರ್ ಪೊಲೀಸ್ ಠಾಣೆಗೆ ಅಂಕಿತಾ ದತ್ತಾ ಅವರು ‘ಶ್ರೀನಿವಾಸ್ ಬಿ ವಿ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ ನೀಡುವ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನನ್ನ ವಿರುದ್ಧ ಕಾಂಗ್ರೆಸ್ ಮುಖಂಡರಿಗೆ ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಕೇರಳ | ಅಲ್ಪಸಂಖ್ಯಾತರ ಮೇಲಿನ ಸಂಘ ಪರಿವಾರದ ದಾಳಿ ಬಗ್ಗೆ ವ್ಯಾಪಕ ಪ್ರಚಾರಕ್ಕೆ ಕಾಂಗ್ರೆಸ್ ಸಿದ್ಧತೆ
“ಅವರು ನನ್ನ ತೋಳು ಹಿಡಿದು ಎಳೆದಾಡಿದ್ದಲ್ಲದೇ ಕೆಟ್ಟ ಪದಗಳನ್ನು ಬಳಸಿ ನನಗೆ ಬೆದರಿಕೆ ಹಾಕಿದರು. ನಾನು ಅವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದರೆ ಕಾಂಗ್ರೆಸ್ನಲ್ಲಿ ನನ್ನ ವೃತ್ತಿಜೀವನವನ್ನು ಹಾಳುಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು” ಎಂದು ದೂರಿದ್ದಾರೆ.
ಬಿ ವಿ ಶ್ರೀನಿವಾಸ್ ವಿರುದ್ಧ ದಿಸ್ಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509, 294, 341, 352, 354, 354 ಎ, ಮತ್ತು 506 ರ ಅಡಿಯಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.