- ದೇವರ ಹೆಸರಲ್ಲಿ ಮಹಿಳೆ, ಮಕ್ಕಳ ಬಲಿ ತೆಗೆದುಕೊಳ್ಳುವ ದೇವದಾಸಿ ಪದ್ಧತಿ
- ಜೋಗತಿಯರಿಗೆ ಭಿಕ್ಷೆ ನೀಡುವುದನ್ನು ನಿಲ್ಲಿಸಿ, ಬದುಕಲು ತಿಳಿವಳಿಕೆ ಹೇಳಿ
ಉತ್ತರ ಕರ್ನಾಟಕ ಸುಪ್ರಸಿದ್ಧ ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ರಥೋತ್ಸವ ಸಂದರ್ಭದಲ್ಲಿ ಮಕ್ಕಳ ಮತ್ತು ಮಹಿಳೆಯರ ಸುರಕ್ಷತಾ ಜಾಗೃತಿ ಮತ್ತು ಸಮಾಜದ ಅನಿಷ್ಠ ದೇವದಾಸಿ ಪದ್ದತಿ ಕುರಿತು ಮೇ 13ರಿಂದ ಮೇ 15ರವರೆಗಿನ ಮೂರು ದಿನಗಳ ಜಾಗೃತಿ ಕಾರ್ಯಕ್ರಮಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾಧಿಗಳಾದ ಪೂರ್ಣಿಮಾ ಯೋಳಭಾವಿ, ಹುಲಿಗೆಮ್ಮ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ್ ಅಯ್ಯಪ್ಪ ಸುತಗುಂಡಿ, ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಯ ಜಾಗೃತಿಯ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಅರವಿಂದ್ ಸುತಗುಂಡಿ ಮಾತನಾಡಿ, “ದೇವರ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಲಿ ತೆಗೆದುಕೊಳ್ಳುವ ದೇವದಾಸಿ ಪದ್ಧತಿಯಂತಹ ಅಂಧ ಆಚರಣೆಗಳು ಮಕ್ಕಳ ಮತ್ತು ಮಹಿಳೆಯರ ಮೇಲೆ ದುಷ್ಟರಿಣಾಮ ಉಂಟು ಮಾಡುತ್ತದೆ. ಬಾಲ್ಯವಿವಾಹ ಪದ್ದತಿ ನಿಲ್ಲಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ಮಾತನಾಡಿ, “ಅನೇಕ ಶತಶತಮಾನಗಳಿಂದಲೂ ಅನಕ್ಷರತೆ, ಮೂಢನಂಬಿಕೆ, ಪರಸ್ಪರ ಶೋಷಣೆ, ದೌರ್ಜನ್ಯಗಳಿಂದ ಬಳಲಿದ ಸಮಾಜವು 21ನೇ ಶತಮಾನದಲ್ಲಿಯಾದರೂ ಶಾಂತಿ ನೆಮ್ಮದಿ ಪರಸ್ಪರ ಸೌಹಾರ್ದತೆಯಿಂದ ಇರಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಶೋಷಣೆ ದೌರ್ಜನ್ಯಗಳನ್ನು ತಡೆಗಟ್ಟಲು ಸಾಮಾಜಿಕ ಜಾಗೃತಿ ಕಹಳೆಯನ್ನು ಮೊಳಗಿಸೋಣ” ಎಂದರು.
“ದೇವಿಯ ಜಗಹೊತ್ತು ಬರುವ ಜೋಗಮ್ಮ, ಜೋಗಪ್ಪಗಳಿಗೆ ಭಿಕ್ಷೆ ಅಥವಾ ಜೋಗ ನೀಡುವುದನ್ನು ನಿಲ್ಲಿಸಬೇಕು ಹಾಗೂ ಅವರಿಗೆ ಬದುಕಲು ತಿಳಿವಳಿಕೆ ನೀಡಬೇಕು” ಎಂದು ತಿಳಿಸಿದರು.
ಸಖಿ-ಒನ್ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೇಸ್ತಾರ ಮಾತನಾಡಿ, “ಮೈಯಲ್ಲಿ ದೇವರು ಬಂದಂತೆ ಆಡುವವರಿಗೆ, ಮಾನಸಿಕ ಸನ್ನಿ ಬರುವಂತವರಿಗೆ ತಜ್ಞ ಮನೋವೈದ್ಯರಿಂದ ಚಿಕ್ಸಿತೆ ಮಾಡಿಸುವುದು ಅತೀ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಯಾವುದೇ ರೀತಿಯ ಜನರು ಕಂಡು ಬಂದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರುವ ತುರ್ತ ಚಿಕಿತ್ಸಾ ಘಟಕ – ಉಚಿತ ಸಲಹಾ ಕೇಂದ್ರ ಸಖಿ-ಒನ್ ಸ್ಟಾಪ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಘಟಕಕ್ಕೆ ತಿಳಿಸಬೇಕು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರಿನ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ
ಜಾಗೃತಿ ಕಾರ್ಯಕ್ರಮದಲ್ಲಿ ಅನಿಷ್ಠ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಲು ಆಟೋ ಪ್ರಚಾರ ಮಾಡಲಾಯಿತು ಮತ್ತು ಮಾಹಿತಿ ಕೇಂದ್ರದ ಮೂಲಕ ಹಾಗೂ ಕರ ಪತ್ರಗಳನ್ನು ವಿತರಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳದ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳಾದ ಎಚ್ ದಾದೇಸಾಬ, ಎಸ್ ಎಚ್ ಸಕ್ಕುಬಾಯಿ, ಗಂಗಾವತಿ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಟಿ ಜಿ ಭೀಮಣ್ಣ, ಯಲಬುರ್ಗಾ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಎಂ ರೇಣುಕಾ, ಕುಷ್ಟಗಿ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಎಂ ಮರಿಯಪ್ಪ, ದೇವದಾಸಿ ಯೋಜನೆಯ ಸ್ವಯಂ ಸೇವಕರು ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಮಲ್ಟಿಪರ್ಪಸ್ ವರ್ಕರ್ ಸರೋಜಾ ಹಿರೇಮಠ್ ಭಾಗವಹಿಸಿದ್ದರು.