- ದೇಶದಾದ್ಯಂತ ಚರ್ಚೆ ಹುಟ್ಟು ಹಾಕಿರುವ ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ ಸಿನಿಮಾ
- ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಆದೇಶ ಹಿಂಪಡೆದ ಆಡಳಿತ ಮಂಡಳಿ
ದೇಶದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬಾಲಿವುಡ್ನ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗಾಗಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ರಜೆ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ.
ಜಿಲ್ಲೆಯ ಇಳಕಲ್ನಲ್ಲಿರುವ ‘ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು’ ಬುಧವಾರ ಮಧ್ಯಾಹ್ನ ತನ್ನ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಿದ್ದು ವಿವಾದಿತ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಎಲ್ಲ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಬಿಎಎಮ್ಎಸ್ ಮೊದಲ ವರ್ಷದಿಂದ ಫೈನಲ್ ವರ್ಷದ ಎಲ್ಲ ವಿದ್ಯಾರ್ಥಿಗಳು ಸಿನಿಮಾ ನೋಡುವಂತೆ ತಿಳಿಸಿದ್ದಾರೆ.
ಕಾಲೇಜು ಪ್ರಾಂಶುಪಾಲ ಡಾ. ಕೆ ಸಿ ದಾಸ್, ಮೇ 23 ರಂದು ಹೊರಡಿಸಿದ ನೋಟಿಸ್ನಲ್ಲಿ, “ಪಟ್ಟಣದ ಶ್ರೀನಿವಾಸ್ ಟಾಕೀಸ್ನಲ್ಲಿ ಮಧ್ಯಾಹ್ನ 12 ರಿಂದ 03 ರವರೆಗೆ ಪದವಿ, ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಎಂಎಸ್) ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಬೆಳಗ್ಗೆ 9 ರಿಂದ 12 ರವರೆಗೆ ಕ್ಲಾಸ್ ಅಟೆಂಡ್ ಮಾಡಿ ನಂತರ ಫ್ರೀಯಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ” ಎಂದು ಪ್ರಾಂಶುಪಾಲರು ಕಾಲೇಜಿನಲ್ಲಿ ನೋಟಿಸ್ ಅಂಟಿಸಿದ್ದಾರೆ. ಸಿನಿಮಾಗಾಗಿ ತರಗತಿಗಳನ್ನು ಸ್ಥಗಿತಗೊಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿಯ ಆದೇಶದ ವಿರುದ್ಧ ವ್ಯಾಪಕ ಟೀಕೆ ಮತ್ತು ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಆಡಳಿತ ಮಂಡಳಿಯು ತನ್ನ ಆದೇಶವನ್ನು ಹಿಂಪಡೆದಿದೆ.
ಕಾಲೇಜು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ
ರಾಜು ಎಂಬುವರು ಇಳಕಲ್ನ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಿಬ್ಬಂದಿಗೆ ಕರೆ ಮಾಡಿ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಲು ಆದೇಶ ಹೊರಡಿಸಿರುವ ಕುರಿತು ತರಾಟೆಗೆ ತೆಗೆದುಕೊಂಡಿರುವ ಆಡಿಯೋ ವೈರಲ್ ಆಗಿದೆ.
”ಸಿನಿಮಾ ನೋಡಲು ಆದೇಶ ಹೊರಡಿಸಲು ನೀವು ಕಾಲೇಜು ನಡೆಸುತ್ತಿರೋ ಇಲ್ಲ ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸ್ತಿರಾ? ಪ್ರತಿವಾರವೂ ನೀವು ಇದೇರೀತಿ ಸಿನಿಮಾ ತೋರಿಸುತ್ತಿರಾ? ನಿರ್ದಿಷ್ಟವಾಗಿ ಇದೇ ಸಿನಿಮಾಕ್ಕೆ ಯಾಕೆ ಆದೇಶ ಹೊಡಿಸಿದ್ದೀರಾ? ನೀವು ಕಾಲೇಜು ನಡೆಸುವ ಉದ್ದೇಶ ಏನು?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಿಬ್ಬಂದಿ “ಬಹುತೇಕ ಹುಡುಗರು ಸಿನಿಮಾ ನೋಡಲು ಹೋಗಬೇಕು ಎಂದು ಕೇಳಿಕೊಂಡಿದ್ದರು. ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, “ನಾಳೆ ಇದೇ ಹುಡುಗರು ಅಶ್ಲೀಲ ಸಿನಿಮಾ ಚೆನ್ನಾಗಿದೆ ಎಂದರೆ, ರಜೆ ನೀಡಿ ಕಳಿಸಿಕೊಡುತ್ತೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಿನಿಮಾ ಹೇಗಿದೆ ನೋಡಿದ್ದೀರಾ? ನಿಮ್ಮ ಪ್ರಾಂಶಪಾಲರು ನೋಡಿದ್ದಾರಾ? ಆ ಸಿನಿಮಾದಲ್ಲಿ ಸಮಾಜಕ್ಕೆ ಏನಾದರೂ ಒಳ್ಳೆಯ ಸಂದೇಶ ನೀಡುವ ಅಂಶಗಳು ಇವೆಯೆ? ಯಾವ ಉದ್ದೇಶಕ್ಕೆ ವಿದ್ಯಾರ್ಥಿಗಳು ಸಿನಿಮಾ ನೋಡಬೇಕು. ನೀವು ಸಿನಿಮಾವನ್ನೇ ನೋಡದೇ ಹೇಗೆ ನಿರ್ಧರಿಸಿದ್ದೀರಾ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಷರತ್ತು ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಇಲ್ಲದಿದ್ದರೆ ವಿರೋಧಿ ಅಭಿಯಾನ: ಎಚ್ಡಿಕೆ ಎಚ್ಚರಿಕೆ
ಉಚಿತ ಪ್ರದರ್ಶನ ಆಯೋಜಿಸಿದ ಬಿಜೆಪಿ ಮಾಜಿ ಶಾಸಕ
ಮತ್ತೊಂದೆಡೆ ಬಾಗಲಕೋಟೆ ನಗರದ ಚಂದನ ಥಿಯೇಟರ್ ನಲ್ಲಿ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಉಚಿತವಾಗಿ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಮೇ 23ರಿಂದ ಮೇ 25ರ ವರೆಗೆ ಮೂರು ದಿನ ಉಚಿತ ಪ್ರದರ್ಶನ ಆಯೋಜಿಸಲಾಗಿದೆ.
ಪ್ರತಿದಿನ 3 ಗಂಟೆಯಿಂದ ಸಂಜೆ 6 ರ ಪ್ರದರ್ಶನ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. “ಎಲ್ಲ ಹಿಂದೂ ವಿದ್ಯಾರ್ಥಿಗಳು ಒಟ್ಟಾಗಿ ನೋಡಿ” ಎಂದು ಮಾಜಿ ಶಾಸಕ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.