ಕಾವ್ಯ ಎಲ್ಲರ ಮನಸ್ಸನ್ನು ಮೃದುಗೊಳಿಸುವ ಮಧುರ ಭಾವ. ಸ್ಥಳೀಯ ಭಾಷೆ, ಶೈಲಿ, ವಸ್ತುವನ್ನು ಬಳಸಿಕೊಂಡು ಸಾಹಿತ್ಯ ಕೃಷಿ ಮಾಡಿದರೆ, ಅದು ಅತ್ಯಂತ ಶಕ್ತಿಶಾಲಿಯಾಗಬಲ್ಲದು ಎಂದು, ಸಾಹಿತಿ ಮತ್ತು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಬಸು ಬೇವಿನಗಿಡದ ಹೇಳಿದ್ದಾರೆ.
ಕಿತ್ತೂರು ಉತ್ಸವದ ನಿಮಿತ್ತ ಬೈಲಹೊಂಗಲದ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗದಗ ಹಾಸ್ಪಿಟಲ್ ಒಗ್ಗೂಡಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಯರಗಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಆಶಯ ನುಡಿಗಳನ್ನಾಡಿ,, ಉತ್ತಮ ಸಾಹಿತ್ಯ ಹೃದಯ ಅರಳಿಸುತ್ತದೆ. ಕವಿಗಳು ಎಲ್ಲ ಪ್ರಕಾರದ ಸಾಹಿತ್ಯವನ್ನು ಓದುವುದರಿಂದ, ವಿಶಿಷ್ಟ ಅನುಭವ ಪಡೆದಂತಾಗುತ್ತದೆಯಲ್ಲದೇ, ವಿಭಿನ್ನ ಕವಿತೆಗಳು ಸೃಷ್ಟಿಯಾಗುತ್ತವೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ, ಮಂಗಲಾ ಶ್ರೀಶೈಲ ಮೆಟಗುಡ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕ್ರತಿ, ಮೌಲ್ಯಗಳು ಮುಂತಾದ ವಿವಿಧ ವಿಷಯಗಳ ಬಗ್ಗೆ, ವಾಚಿಸಿದ ಕವನಗಳನ್ನು ಆಸ್ವಾದಿಸಿದಾಗ ಆಗುವ ಆನಂದ ಬಹಳ ದೊಡ್ಡದು. ಬರೆದಿಟ್ಟ ಕವಿತೆಗಳನ್ನು ಪುಸ್ತಕದ ರೂಪದಲ್ಲಿ ಹೊರತಂದು, ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ, ಪಟ್ಟಣದ ಗದಗ ಆಸ್ಪತ್ರೆಯ ಹೃದಯ ಮತ್ತು ಮಧುಮೇಹ ರೋಗ ತಜ್ಞ ಡಾ. ಮಹಾಂತೇಶ ಪ. ಗದಗ ಮಾತನಾಡಿ, ಸಾಹಿತ್ಯ ಓದುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸುಷ್ಮಾ ಎಂ. ಗದಗ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ. ಚಂದ್ರಶೇಖರ ಬಿ.ಗಣಾಚಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಮಾಜಿ ಜಿಲ್ಲಾಧ್ಯಕ್ಷ ಮೋಹನ ಬಸನಗೌಡ ಪಾಟೀಲ, ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಮಹೇಶ ಕೋಟಗಿ, ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ, ಲಕ್ಷ್ಮೀ ಮುಗಡ್ಲಿಮಠ, ಶಶಿಕಲಾ ಯಲಿಗಾರ, ಅನಿಲ ರಾಜಣ್ಣವರ, ಆರ್.ಎಂ. ಹೋಟಕರ, ಕವಿ-ಕವಯತ್ರಿಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ ಹಡಪದ ನಿರೂಪಿಸಿದರು, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಸ್ವಾಗತಿಸಿದರು, ಶ್ರೀಶೈಲ ಗದಗ ಕನ್ನಡ ಗೀತಗಾಯನ ನಡೆಸಿಕೊಟ್ಟರು, ಭಾರತಿ ಬಳಗಪ್ಪನವರ ಪ್ರಾರ್ಥಿಸಿದರು, ರಾಜು ಹಕ್ಕಿ ವಂದಿಸಿದರು.