- ‘ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲ್ಲ, ಗೂಂಡಾ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ’
- ‘ಉಚಿತ ಯೋಜನೆ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲು ಆರ್ಎಸ್ಎಸ್ ಬ್ಯಾನ್ ಎನ್ನುತ್ತಿದ್ದಾರೆ‘
ದೇಶದಲ್ಲಿ ಕಾಂಗ್ರೆಸ್ ಸರ್ಕಾರ ನೆಗೆದು ಬಿದ್ದಿದೆ. ಇವರಿಗೆ ತಾಕತ್ ಧಮ್ ಇದ್ರೆ, ಬಜರಂಗದಳ ಆಗಲಿ ಅಥವಾ ಒಂದು ಆರ್ಎಸ್ಎಸ್ ಶಾಖೆಯನ್ನು ಬ್ಯಾನ್ ಮಾಡಿ ನೋಡಿ, ಬ್ಯಾನ್ ಮಾಡಿದ ಮೂರು ತಿಂಗಳಿಗೆ ನಿಮ್ಮ ಸರ್ಕಾರ ಇರಲ್ಲ ಎಂದು ಆರ್ ಅಶೋಕ್ ಗುಡುಗಿದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಗೋವಿಂದ ಕಾರಜೋಳ ಜೊತೆಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಗೂಟದ ಕಾರುಗಳೆಲ್ಲ ಎಲ್ಲವೂ ವಾಪಸು ಹೋಗಬೇಕು. ಈ ದೇಶದ ಪ್ರಧಾನಿಗಳು ಆರ್ಎಸ್ಎಸ್ನವರು. ಈ ಸಂಘಟನೆ ಹಿಂದೂಗಳ ಧ್ವನಿ. ಅದನ್ನು ಮುಟ್ಟಲು ನಿಮ್ಮಿಂದ ಆಗುವುದಿಲ್ಲ” ಎಂದು ಅಶೋಕ್ ಎಚ್ಚರಿಸಿದರು.
ಸರ್ಕಾರ ಬಹಳ ದಿನ ಉಳಿಯಲ್ಲ
“ಉಚಿತ ಯೋಜನೆಗಳ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸಲು ಆರ್ಎಸ್ಎಸ್ ಬ್ಯಾನ್ ವಿಚಾರ ಹೇಳುತ್ತಿದ್ದಾರೆ. ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಲು ನಿಮ್ಮ ಅಪ್ಪ, ತಾತಾ, ಅಜ್ಜಿ ಕೈಯಲ್ಲೇ ಆಗಲಿಲ್ಲ. ಈಗ ಆಗುತ್ತಾ. ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಸರ್ಕಾರವಾಗಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ. ಇದು ಗೂಂಡಾ ಸರ್ಕಾರ ಎಂಬುದು ಜಗಜ್ಜಾಹೀರಾಗಿದೆ” ಎಂದರು.
“ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೆಚ್ಚು ಮಾತನಾಡುತ್ತಿದ್ದಾರೆ. ಸಿಎಂ ಸೈಲೆಂಟ್ ಆಗಿದ್ದರೆ, ಡಿಸಿಎಂ ವೈಲೆಂಟ್ ಆಗಿದ್ದಾರೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಸಂಸತ್ ಭವನ ಉದ್ಘಾಟನೆ | ಬಿಜೆಪಿ ಬಗ್ಗೆ ಮೃದು ಧೋರಣೆ ಎಂದು ಭಾವಿಸಬೇಕಿಲ್ಲ, ನಾವು ಹೋಗುತ್ತೇವೆ: ಎಚ್ಡಿಕೆ
ಯಾರೂ ಕರೆಂಟ್ ಬಿಲ್ ಕಟ್ಟಬೇಡಿ
ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರೂ ಗ್ಯಾರಂಟಿ ಕಾರ್ಡ್ ಹಿಡಿದು, ಸರ್ಕಾರ ಬಂದ 24 ಗಂಟೆ ಒಳಗೆ ಗ್ಯಾರಂಟಿ ಜಾರಿ ಅಂತ ಹೇಳಿದ್ದರು. ಆದರೆ, 240 ಗಂಟೆ ಕಳೆದರೂ ಗ್ಯಾರಂಟಿ ಯೋಜನೆ ಜಾರಿ ಆಗಿಲ್ಲ. ದಾರಿಯಲ್ಲಿ ಹೋಗುವವರಿಗೆಲ್ಲ ಉಚಿತ ಯೋಜನೆ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಇದೇ ದಾರಿಹೋಗುವವರಿಂದ ಮತ ಹಾಕಿಸಿಕೊಂಡಿದ್ದಾರೆ ಎನ್ನುವ ಅರಿವು ಅವರಿಗಿಲ್ಲ. ಈಗ ಗ್ಯಾರಂಟಿ ಯೋಜನೆಗಳಿಗೆ ಕಂಡಿಷನ್ ಹಾಕುತ್ತಿದ್ದಾರೆ. ಇದು ಮೋಸ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಯಾರೂ ಬಸ್ನಲ್ಲಿ ಟಿಕೆಟ್ ತಗೋಬೇಡಿ” ಎಂದು ಕರೆ ನೀಡಿದರು.
“ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಅತ್ತೆ, ತಾಯಿ, ಮಾವನ ಮನೆಗೆ, ದೇವಸ್ಥಾನಕ್ಕೆ ಹೋಗಲು ಬಸ್ ಫ್ರೀ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ ಈವರೆಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಗ್ಯಾರಂಟಿ ಘೋಷಣೆ ಮಾಡುವಾಗ ಯೋಚನೆ ಮಾಡಿರಲಿಲ್ಲವಾ” ಎಂದು ಆರ್ ಅಶೋಕ್ ಪ್ರಶ್ನಿಸಿದರು.