ಅರಣ್ಯ ಇಲಾಖೆಯ ಸಿಬ್ಬಂದಿಯು ಅರಣ್ಯ ರಕ್ಷಣೆಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಿರ್ಜಾ ವಾಸಿಮ್ ಅವರಿಗೆ ಗಜಗೌರವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಹಾಗೂ ದೇಶದಲ್ಲಿ ಉತ್ತಮ ಅರಣ್ಯ ರಕ್ಷಕ ಎಂದು ಗಾರ್ಡ್ ಆನಂದ್ ಅವರಿಗೆ ಪ್ರಶಸ್ತಿ ದೊರಕಿರುವುದು ಹೆಮ್ಮೆ ಎನಿಸಿದೆ ಎಂದು ಹುಲಿ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ಶ್ಲಾಘಿಸಿದರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಬಂಡೀಪುರದ ಮೇಲು ಕಾಮನ ಹಳ್ಳಿಯ ಸಫಾರಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಮುಂಚೂಣಿ ಸಿಬ್ಬಂದಿ ದಿನಾಚರಣೆಯಲ್ಲಿ ಮಾತನಾಡಿದರು.
“ಬಂಡೀಪುರ ಇಡೀ ದೇಶದಲ್ಲಿಯೇ ಎರಡನೇ ಅತ್ಯುತ್ತಮ ಹುಲಿ ಪ್ರದೇಶವೆಂದು ಖ್ಯಾತಿ ಪಡೆದಿರುವುದು ಹಮ್ಮೆಯ ಸಂಗತಿ. ಈವರೆಗೆ ನಿರ್ವಹಣೆಯಲ್ಲಿ ಶೇ.70 ರಿಂದ ಶೇ.80ರಷ್ಟು ಅಂಕಗಳಿಸುತ್ತಿದ್ದ ಬಂಡೀಪುರ ಇದೀಗ ಶೇ.95 ಅಂಕ ಪಡೆದಿದ್ದು, ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶವೆಂದು ಗುರುತಿಸಿಕೊಂಡಿದೆ. ಇದಕ್ಕೆ ಮುಂಚೂಣಿ ಸಿಬ್ಬಂದಿಗಳು ಮುಖ್ಯ ಕಾರಣ” ಎಂದು ಹೇಳಿದರು.
“ಬಂಡೀಪುರಕ್ಕೆ ಇಷ್ಟು ಹೆಸರು ಬರಲು ಕಾರಣ ಮುಂಚೂಣಿ ಸಿಬ್ಬಂದಿಗಳಾದ ವಾಚರ್ ಗಾರ್ಡ್ ಮತ್ತು ರೇಂಜರ್ ಸೇರಿದಂತೆ ಕೆಳಮಟ್ಟದ ಅಧಿಕಾರಿಗಳು ಮತ್ತು ಪ್ರತಿಯೊಬ್ಬರು ಶ್ರಮಿಸಿದ್ದಾರೆ. ಆನೆಗಣತಿಯಲ್ಲಿ ದೇಶದಲ್ಲಿ ಮೊದಲನೇ ಸ್ಥಾನ ಪಡೆದಿದೆ. ಹುಲಿ ಗಣತಿಯಲ್ಲಿ ಎರಡನೇ ಸ್ಥಾನ ಮತ್ತು ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆದಿದ್ದು, ನಮ್ಮ ಬಂಡೀಪುರದಲ್ಲಿ 200 ಚಿರತೆಗಳು ಇವೆ. ಇದಕ್ಕೆ ಕಾರಣಕರ್ತರಾಗಿರುವ ಮುಂಚೂಣಿ ಸಿಬ್ಬಂದಿಗಳು ಮತ್ತು ಅವರ ಕುಟುಂಬದವರನ್ನು ಗೌರವಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಮುಂಚೂಣಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ಬಂಡೀಪುರದಲ್ಲಿ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಕಾಡಿನ ಪ್ರಾಣಿಗಳು ಸಾವನ್ನಪ್ಪುವ ಸಂಖ್ಯೆ ಇಲ್ಲದೆ ಇರುವುದು ಸಂತೋಷದಾಯಕವಾಗಿದೆ. ಸಿಬ್ಬಂದಿಗಳು ಬಂಡೀಪುರ ಅರಣ್ಯ ಪ್ರದೇಶದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅರಣ್ಯವನ್ನು ರಕ್ಷಣೆ ಮಾಡುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎಳ್ಳು, ತೊಗರಿ ಸಂಪೂರ್ಣ ನೆಲಸಮ ಮಾಡಿದ ಕಿಡಿಗೇಡಿಗಳು
ಇದೇ ಸಂದರ್ಭದಲ್ಲಿ ಹಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ, ಉಪಾಧ್ಯಕ್ಷ ನಾಗರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್, ನವೀನ್, ರವೀಂದ್ರ, ಬಂಡೀಪುರ ಅರಣ್ಯ ಇಲಾಖೆಯ ಕಚೇರಿ ಅಧೀಕ್ಷಕ ಶೇಷ ಪ್ರಸಾದ್, ವಲಯ ಅರಣ್ಯ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.