ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಸೈಬರ್ ಜಾಲಕ್ಕೆ ಬಿದ್ದು ಮೋಸ ಹೋಗುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಎಷ್ಟೆ ಎಚ್ಚರಿಕೆ ವಹಿಸಿ ಎಂದು ಹೇಳಿದರೂ ಕೂಡ ವಂಚಕರ ಜಾಲದಲ್ಲಿ ಜನರು ಸಿಲುಕುತ್ತಿದ್ದಾರೆ. ಇದೀಗ, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ (ಪಿಎಂಎಂವೈ) ₹10 ಲಕ್ಷ ಸಾಲ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ ₹1.63ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಿ.ನಾರಾಯಣಸ್ವಾಮಿ ವಂಚನೆಗೆ ಒಳಗಾದವರು. ಇವರು ಬೆಂಗಳೂರಿನ ಹುಳಿಮಾವು ನಿವಾಸಿ. ಇವರು ನೀಡಿದ ದೂರಿನ ಮೇರೆಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ ?
ನಾರಾಯಣಸ್ವಾಮಿ ಅವರಿಗೆ ಹಣದ ಅಗತ್ಯವಿದ್ದ ಹಿನ್ನೆಲೆ, ಸಾಲ ಪಡೆದುಕೊಳ್ಳಲು ಮುಂದಾಗುತ್ತಾರೆ. ಈ ವೇಳೆ, ಮುದ್ರಾ ಯೋಜನೆಯಡಿ ಸಾಲ ಪಡೆಯಲು ಆನ್ಲೈನ್ನಲ್ಲಿ ಮಾಹಿತಿ ಹುಡುಕುವಾಗ ಮೊಬೈಲ್ ಸಂಖ್ಯೆಯೊಂದು ಸಿಕ್ಕಿದೆ.
ಆನ್ಲೈನ್ ದೊರೆತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಣೆ ಮಾಡಿದ್ದಾರೆ. ಅವರು ಮುದ್ರಾ ಯೋಜನೆಯಡಿ ₹10 ಲಕ್ಷ ಸಾಲ ಕೊಡಿಸುವುದಾಗಿ ಹೇಳಿ ಭರವಸೆ ಮೂಡಿಸಿದ್ದಾರೆ. ಈ ವೇಳೆ, ಸಾಲ ಪಡೆಯಲು ಕೆಲವು ದಾಖಲಾತಿಗಳು ಬೇಕು ಎಂದು ಹೇಳಿ ನಾರಾಯಣಸ್ವಾಮಿ ಅವರ ವೈಯಕ್ತಿಕ ವಿವರ, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ, ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮತ್ತು ಮುದ್ರಾ ಯೋಜನೆಯ ನಕಲಿ ಲೆಟರ್ಹೆಡ್ ಬಳಸಿ ₹10 ಲಕ್ಷ ಸಾಲ ಮಂಜೂರಾಗಿದೆ ಎಂದು ನಾರಾಯಣಸ್ವಾಮಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದಾರೆ. ಜತೆಗೆ, ನಕಲಿ ಅಗ್ರಿಮೆಂಟ್, ನಕಲಿ ಬಾಂಡ್ಗಳು ಹಾಗೂ ನಕಲಿ ಸಾಲ ಮಂಜೂರಾತಿ ಪತ್ರಗಳನ್ನೂ ಲಗತ್ತಿಸಿದ್ದಾರೆ. ಸಾಲದ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗಲು ಕೆಲವು ಶುಲ್ಕಗಳನ್ನು ಪಾವತಿಸಬೇಕು ಎಂದು ಹೇಳೀದ್ದಾರೆ.
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ(ಪಿಎಂಎಂವೈ) 10 ಲಕ್ಷ ರೂಪಾಯಿ ಸಾಲ ನೀಡುವುದಾಗಿ ಹೇಳಿ ನಾನಾ ಶುಲ್ಕಗಳ ನೆಪದಲ್ಲಿ ₹1.63 ಲಕ್ಷ ವರ್ಗಾಯಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಲೆಮರೆಸಿಕೊಂಡಿದ್ದ ಮೂವರು ರೌಡಿಶೀಟರ್ಗಳ ಬಂಧಿಸಿದ ಸಿಸಿಬಿ ಪೊಲೀಸರು
ಸಾಲ ಮಂಜೂರು ಮಾಡದೇ, ಪದೇ ಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ನಾರಾಯಣಸ್ವಾಮಿ ಅವರು ಲೋನ್ ಮಾಡುವುದು ಬೇಡ ನಾನು ಕೊಟ್ಟಿರುವ ಹಣವನ್ನು ಹಿಂತಿರುಗಿಸಿ ಎಂದು ಹೇಳಿದ್ದಾರೆ.
ನಾರಾಯಣಸ್ವಾಮಿ ಅವರು ಮರಳಿ ಹಣ ನೀಡಿ ಎಂದು ಕೇಳಿದಾಗ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಆಗ ನಾರಾಯಣಸ್ವಾಮಿ ಅವರಿಗೆ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಸದ್ಯ ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.