ದುಬಾರಿ ಮೌಲ್ಯದ ಮೊಬೈಲ್ಗಳನ್ನು ಕಳ್ಳತನ ಮಾಡಿಸಿ ಬಳಿಕ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಖದೀಮರ ತಂಡದ ನಾಯಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹2 ಕೋಟಿ ಮೌಲ್ಯದ 1,037 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಪಾಷಾ ಅಲಿಯಾಸ್ ಆರೀಫ್ ಪಾಷಾ ಹಾಗೂ ಆತನ ಸಹಚರರಾದ ಮೊಹಮದ್ ಉಮರ್, ಐಯಾನ್ ಅಲಿಯಾಸ್ ಅಲೀಂ ಪಾಷ ಹಾಗೂ ಮೊಹಮದ್ ಸಲೀಂ ಬಂಧಿತರು.
ಆರೋಪಿ ಮೊಹಮ್ಮದ್ ಪಾಷಾ ಅಲಿಯಾಸ್ ಆರೀಫ್ ಪಾಷಾ ಎಂಬಾತ ನಗರದಾದ್ಯಂತ ಮೊಬೈಲ್ ಕಳ್ಳತನ ಮಾಡಲು ತನ್ನದೇ ಸಹಚರರನ್ನು ಒಳಗೊಂಡ ಒಂದು ತಂಡವನ್ನು ನೇಮಿಸಿಕೊಂಡಿದ್ದ. ಕದ್ದ ಫೋನ್ಗಳ ಮೌಲ್ಯದ ಆಧಾರದ ಮೇಲೆ ತನ್ನ ಸಹಚರರಿಗೆ ₹2,000ದಿಂದ ₹6,000 ವರೆಗೆ ಕಮಿಷನ್ ನೀಡುತ್ತಿದ್ದ ಎನ್ನಲಾಗಿದೆ.
”ಗೋರಿಪಾಳ್ಯ ನಿವಾಸಿ ಪಾಷಾ ಒಂದು ವರ್ಷದಿಂದ ಮೊಬೈಲ್ ಕಳ್ಳತನ ಮಾಡುತ್ತಿದ್ದ. ₹10,000 ದಿಂದ ₹1 ಲಕ್ಷದವರೆಗಿನ ಫೋನ್ಗಳನ್ನು ಕದಿಯಲು ನಗರದಾದ್ಯಂತ ತನ್ನ ಪರವಾಗಿ ಸಹಚರರನ್ನು ನೇಮಿಸಿಕೊಂಡಿದ್ದ” ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಲದಂಡಿ ಹೇಳಿದರು.
“ಆರೋಪಿಗಳು ಮೊಬೈಲ್ ಫೋನ್ಗಳನ್ನು ದಾಸ್ತಾನು ಮಾಡಿ ಬೆಂಗಳೂರು, ತಮಿಳುನಾಡು ಹಾಗೂ ಕೇರಳದಲ್ಲಿ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಕೇರಳ ಮತ್ತು ತಮಿಳುನಾಡಿನ ಮೊಬೈಲ್ ಮಾರಾಟ ದಂಧೆಕೋರರಿಗೆ ₹6 ರಿಂದ ₹8 ಸಾವಿರಕ್ಕೆ ವಿಲೇವಾರಿ ಮಾಡುತ್ತಿದ್ದರು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜಿನ ಸಮೀಪ ಕದ್ದ ಮೊಬೈಲ್ ಮಾರಾಟಕ್ಕೆ ಆರೀಫ್ ಪಾಷ ಹಾಗೂ ಆತನ ಸಹಚರರು ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್ಸ್ಪೆಕ್ಟರ್ ಸಿ.ಕೃಷ್ಣಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿಗಳನ್ನು ಬಂಧಿಸಿ ನಾನಾ ಬ್ರ್ಯಾಂಡ್ಗಳ 100ಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ಒಳಗೊಂಡ ಪೆಟ್ಟಿಗೆಯೊಂದನ್ನು ವಶಪಡಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 8 ವರ್ಷಗಳ ನಂತರ ಓಆರ್ಆರ್ ಅಂಡರ್ಪಾಸ್ ಕಾಮಗಾರಿ ಆರಂಭ
“ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಇಟ್ಟಿದ್ದ ಫೋನ್ಗಳು ಕದ್ದಿರುವುದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅವರ ಮಾಹಿತಿಯ ಆಧಾರದ ಮೇಲೆ ಮತ್ತಿಬ್ಬರು ಆರೋಪಿಗಳಾದ ಮೊಹಮ್ಮದ್ ಅಯಾನ್ ಅಲಿಯಾಸ್ ಅಲೀಮ್ ಮತ್ತು ಮೊಹಮ್ಮದ್ ಸಲೀಂ ಅವರನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.