ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋವನ್ನು ಪ್ರಸಾರಗೈದ ಮಾಧ್ಯಮಗಳ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮಾಧ್ಯಮ ನೀತಿ ಸಂಹಿತೆಯ ವಿರುದ್ಧವಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸುತ್ತೋಲೆ ಟ್ವೀಟ್ ಮಾಡಿರುವ ಬೆಂಗಳೂರು ಪೊಲೀಸ್ ಆಯುಕ್ತರು, “ಇತ್ತೀಚಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಘಟನೆಯ ವಿಡಿಯೋ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದು ಯುವಕನ ವೈಯಕ್ತಿಕ ದುರಂತ, ಪೋಷಕರು ದುಃಖದಲ್ಲಿದ್ದಾರೆ. ಈ ವಿಡಿಯೋದಿಂದಾಗಿ ಅವರಿಗೆ ಹೆಚ್ಚಿನ ನೋವಾಗದಿರಲಿ. ಈ ವಿಷಯವನ್ನು ತಕ್ಷಣವೇ ತೆಗೆದುಹಾಕಲು ಮಾಧ್ಯಮಕ್ಕೆ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
A video of the recent Attiguppe Metro station incident is found being telecast in some of the media channels. It's a personal tragedy of a young boy and the parents are in grief. Let's not cause more pain to them. Appeal to media to takedown this content forthwith. pic.twitter.com/5kMJS62OfB
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) March 24, 2024
“ಮಾಧ್ಯಮಗಳು ಆತ್ಮಹತ್ಯೆ, ಅಪರಾಧ, ಮಹಿಳೆ, ಮಕ್ಕಳು ವೃದ್ಧರ ವಿರುದ್ಧದ ಶೋಷಣೆ, ಸಾವು, ಅಪಘಾತ ಮೊದಲಾದವುಗಳ ದೃಶ್ಯವನ್ನು ಪ್ರಸಾರ ಮಾಡುತ್ತಿದ್ದು, ಇದು ಜನರಿಗೆ ನೋಡಲು ಸಾಧ್ಯವಾಗದ್ದು. ಮಾಧ್ಯಮಗಳು ಇಂತಹ ವಿಡಿಯೋ, ಸುದ್ದಿ ಪ್ರಸಾರ ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಮತ್ತು ಶಿಸ್ತು ಇರಬೇಕು” ಎಂದು ಉಲ್ಲೇಖಿಸಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸುತ್ತೋಲೆಯನ್ನು ಪೊಲೀಸ್ ಆಯುಕ್ತರು ಎಕ್ಸ್ (ಟ್ವೀಟ್) ಮಾಡಿದ್ದಾರೆ.
ಅತ್ತಿಗುಪ್ಪೆ ಮೆಟ್ರೋ ಹಳಿಗೆ ಹಾರಿ ಯುವಕ ಧ್ರುವ್ ಠಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ವರದಿಯಾಗಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮೊದಲ ವರ್ಷದ ಬಿಎ ಎಲ್ಎಲ್ಬಿ ವಿದ್ಯಾರ್ಥಿ ಮಾನಸಿಕ ಖಿನ್ನತೆಗೆ ಔಷಧಿ ಪಡೆಯುತ್ತಿದ್ದು ಅದು ಆತನ ಕುಟುಂಬಸ್ಥರಿಗೂ ತಿಳಿದಿತ್ತು ಎಂದು ವರದಿ ಉಲ್ಲೇಖಿಸಿದೆ.