ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಸರ್ಕಾರದ ಆದೇಶದಂತೆ ಶೇ.60ರಷ್ಟು ಜಾಗವನ್ನು ಕನ್ನಡ ಭಾಷೆಗೆ ನೀಡಬೇಕು. ಫೆಬ್ರವರಿ 28ರೊಳಗೆ ಆದೇಶವನ್ನು ಜಾರಿಗೆ ತರದಿದ್ದರೆ, ಕರವೇ ರಾಜ್ಯಾದ್ಯಂತ ಬೆಂಗಳೂರು ಮಾದರಿಯ ಅಭಿಯಾನವನ್ನು ನಡೆಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಸಿದರು.
ಬೆಳಗಾವಿಯಲ್ಲಿ ಕರವೇ ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಯೋಜಿಸಿದ್ದು, ಕನ್ನಡ ಭಾಷೆ, ನೆಲ, ಜಲ, ಕನ್ನಡಿಗರ ಉದ್ಯೋಗ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗುವುದು. ಕರ್ನಾಟಕದ ಪ್ರಗತಿ ಮತ್ತು ಕನ್ನಡಿಗರ ಉಳಿವಿನ ಬಗ್ಗೆ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.
“ರಾಜ್ಯ ಸರ್ಕಾರ ಕೇವಲ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವೆಂದು ಘೋಷಿಸಿದರೆ ಸಾಲದು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ರಾಜ್ಯಾದ್ಯಂತ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಫೆ.28ರವರೆಗೆ ಗಡುವು ನೀಡಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಬದ್ಧತೆ ತೋರಿಸಬೇಕು. ಕನ್ನಡಿಗರ ಬಗ್ಗೆ ಕಾಳಜಿ ತೋರಿಸಬೇಕು” ಎಂದು ಹೇಳಿದರು.
“ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮ ಮುಂತಾದ ಐತಿಹಾಸಿಕ ವೀರರ ಜನ್ಮಸ್ಥಳ ಬೆಳಗಾವಿ. ಕರವೇ ಯಾವಾಗಲೂ ಬೆಳಗಾವಿಯ ಕನ್ನಡಿಗರ ಸಮಸ್ಯೆಗಳಿಗೆ ಧ್ವನಿಯಾಗಿದೆ. ಗಡಿ ಪ್ರದೇಶದಲ್ಲಿ ಕನ್ನಡ ನಾಮಫಲಕಗಳನ್ನು ಬೇಡವೆಂದು ಹೇಳುವವರು ಸುಪ್ರಿಂ ಕೋರ್ಟ್ಗೆ ಹೋಗಲಿ. ಒತ್ತಡಕ್ಕೆ ಮಣಿದು ಕನ್ನಡವನ್ನು ನಿರ್ಲಕ್ಷಿಸಿದರೆ ಖಂಡಿತವಾಗಿಯೂ ತೀವ್ರ ಹೋರಾಟ ನಡೆಯಲಿದೆ. ಕಡ್ಡಾಯ ನಾಮಫಲಕಗಳ ಚಲನೆಯಿಂದ ಕರವೇ ಹಿಂದೆ ಸರಿಯುವುದಿಲ್ಲ” ಎಂದರು.
“ಕನ್ನಡ ಹೋರಾಟಗಾರರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಜ್ಯವನ್ನು ಆಳುವಾಗ ಕನ್ನಡದ ಮೇಲಿನ ತಮ್ಮ ಬದ್ಧತೆಯನ್ನು ಮರೆತಿದ್ದಾರೆ. ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೋರಾಡಿದ್ದಕ್ಕಾಗಿ ನನ್ನನ್ನು 15 ದಿನಗಳ ಕಾಲ ಜೈಲಿಗೆ ಹಾಕಿದ್ದರು. ಇತ್ತೀಚಿನ ಹೋರಾಟಗಳಿಗೆ ಸಂಬಂಧಿಸಿದಂತೆ ಪೊಲೀಸರು 16 ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾವು ಯಾವುದೇ ಗಂಭೀರ ಅಪರಾಧಗಳನ್ನು ಮಾಡಿಲ್ಲ. ಬಂಡವಾಳಶಾಹಿಗಳ ಕೈಯಲ್ಲಿರುವ ಸಿದ್ದರಾಮಯ್ಯ ಸರ್ಕಾರ ಕನ್ನಡ ಮತ್ತು ಕನ್ನಡಿಗರ ಹಿತವನ್ನು ಕಡೆಗಣಿಸುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ‘ನೆಮ್ಮದಿಯಾಗಿ ಕರ್ತವ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ’; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ
“ಎಸ್ ಎಂ ಕೃಷ್ಣ, ದೇವೇಗೌಡ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ನನ್ನ ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಮಹಾದೇವ ತಳವಾರ, ಸುರೇಶ ಗವಣ್ಣವರ ಇದ್ದರು.