ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕನೊಬ್ಬನನ್ನು ಹೌರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಟಿಎಂಸಿಯ ನಾಯಕ ಶೇಖ್ ಶಹಜಹಾನ್ ಮತ್ತು ಆತನ ಬೆಂಬಲಿಗರು ಸಂದೇಶ್ಖಾಲಿಯಲ್ಲಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನೆಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ನಂತರ ಈ ಬೆಳವಣಿಗೆ ನಡೆದಿದೆ.
ಹೌರಾದ ಹೋಟೆಲ್ವೊಂದರಲ್ಲಿ ಆರೋಪಿ ಸಬ್ಯಸಾಚಿ ಘೋಷ್ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ, ಬಿಜೆಪಿ ಅಪರಾಧಿಗಳನ್ನು ರಕ್ಷಿಸುತ್ತಿದೆ ವಿನಃ ಮಹಿಳೆಯರನ್ನಲ್ಲ ಎಂದಿದೆ.
”ಬಿಜೆಪಿ ನಾಯಕ ಸಬ್ಯಸಾಚಿ ಘೋಷ್ ಹೌರಾದ ಹೋಟೆಲ್ನಲ್ಲಿ ಅಪ್ರಾಪ್ತೆಯರನ್ನು ಬಳಸಿ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಯಲಿಗೆ ಬಂದಿದೆ. ಪೊಲೀಸರು 11 ಆರೋಪಿಗಳನ್ನು ಬಂಧಿಸಿ 6 ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಇದು ಬಿಜೆಪಿಯಾಗಿದೆ. ಅವರು ಮಹಿಳೆಯರನ್ನು ರಕ್ಷಿಸುವುದಿಲ್ಲ, ಆರೋಪಿಗಳನ್ನು ರಕ್ಷಿಸುತ್ತಾರೆ” ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಸಂದೇಶ್ಖಾಲಿ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಲು ಬಿಜೆಪಿ ಮಹಿಳಾ ಕಾರ್ಯಕರ್ತರ ನಿಯೋಗ ರಾಜ್ಯ ಸರ್ಕಾರದ ಮೇಲೆ ಒತ್ತಡವೇರಲು ಸಮಸ್ಯೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೆರಳಿದಾಗ ಹೌರಾದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಿಜೆಪಿ ಕಾರ್ಯಕರ್ತೆಯರ ಗುಂಪು ಸಂದೇಶ್ಖಾಲಿ ಪ್ರದೇಶಕ್ಕೆ ತೆರಳಿದಾಗ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ಅವರನ್ನು ತಡೆದಿದ್ದರು.
ಮಾನವ ಹಕ್ಕುಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡ ಸಂದೇಶ್ಖಾಲಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ವಿಚಾರಣೆ ಕೈಗೊಂಡಿದೆ.
ಸಂದೇಶ್ಖಾಲಿಯ ಬಹುತೇಕ ಮಹಿಳೆಯರು ಟಿಎಂಸಿ ನಾಯಕರು ತಮ್ಮ ಮೇಲೆ ವ್ಯವಸ್ಥಿತವಾಗಿ ಲೈಂಗಿಕ ದೌರ್ಜನ್ಯ ನಡೆಸುವುದರೊಂದಿಗೆ ತಮ್ಮ ಭೂಮಿಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಿಲ್ಲಾ ಪರಿಷದ್ನ ಸದಸ್ಯನಾದ ಶೇಖ್ ಶಹಜಹಾನ್ ಪ್ರಕರಣದ ಪ್ರಮುಖ ಆರೋಪಿ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಮಹಿಳೆಯರು ಶೇಖ್ ಶಹಜಹಾನ್ ಆರೋಪಿಸಿದ ನಂತರ ಆತ ತಲೆಮರೆಸಿಕೊಂಡಿದ್ದಾನೆ. ಜನವರಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆಯೂ ಸಂದೇಶ್ಖಾಲಿಯಲ್ಲಿ ದಾಳಿ ನಡೆದಿತ್ತು. ಪೊಲೀಸರ ಆತನ ಇಬ್ಬರು ಸಹಚರರಾದ ಶಿಬಪ್ರಸಾದ ಹಜ್ರಾ ಹಾಗೂ ಉತ್ತಮ್ ಸರ್ದಾರ್ ಅವರನ್ನು ಮಹಿಳೆಯರ ದೂರಿನ ಮೇರೆಗೆ ಬಂಧಿಸಲಾಗಿದೆ.