ಅಮಾನಿಕೆರೆಯ ದಡದಲ್ಲಿ ಉದ್ದಕ್ಕೂ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರಿಂದ ಕೆರೆ ಅಂಗಳ ಕಟ್ಟಡ ತ್ಯಾಜ್ಯದಿಂದ ತುಂಬಿ ಹೋಗಿದ್ದು, ಕೆರೆಗೆ ಅಪಾಯ ಎದುರಾಗಿದೆ ಎಂದು ವಿಜಯಪುರ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಿಂದ ದಂಡಿಗಾನಹಳ್ಳಿಯ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆರೆಯ ಅಂಗಳದಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ಕೆರೆಯ ಬಹಳಷ್ಟು ಪ್ರದೇಶ ಈಗಾಗಲೇ ಮುಚ್ಚಿಹೋಗಿದೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಸ್ಥಳೀಯರು ದೂರಿದ್ದಾರೆ.
“ಕೆರೆಯ ಅಂಗಳದಲ್ಲಿ ಕಟ್ಟಡ ತ್ಯಾಜ್ಯ ಸುರಿದಿರುವ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ, ಕೆರೆ ತಮ್ಮ ವ್ಯಾಪ್ತಿಗೆ ಬರುತ್ತದೆ. ಆದರೆ, ಈಗ ಎಚ್ ಎನ್ ವ್ಯಾಲಿ ಯೋಜನೆಗೆ ಸೇರ್ಪಡೆಗೊಂಡಿದೆ. ಕೆರೆಯ ನಿರ್ವಹಣೆಯನ್ನು ಅವರೇ ಮಾಡುತ್ತಿದ್ದಾರೆ” ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.
“ಎಚ್ ಎನ್ ವ್ಯಾಲಿ ಯೋಜನೆಯ ಅಧಿಕಾರಿಗಳು ಈ ಕಡೆಗೆ ಸುಳಿಯುವುದೇ ಇಲ್ಲ. ಕೆರೆಗಳಿಗೆ ನೀರು ಹರಿಸುವುದಷ್ಟೇ ತಮ್ಮ ಕೆಲಸವೆಂದು ಭಾವಿಸಿಕೊಂಡಿದ್ದಾರೆ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೇಶಿರಾಜನ ಕಾಯಕ ಭೂಮಿ ಪುನಶ್ಚೇತನಕ್ಕೆ ಕೆಆರ್ಎಸ್ ಪಕ್ಷ ಆಗ್ರಹ
“ಕೆರೆಯ ಪ್ರದೇಶ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸಬೇಕು. ಕೆರೆಯಂಗಳದಲ್ಲಿ ಬೆಳೆದು ನಿಂತಿರುವ ಗಿಡಗಂಟಿ ತೆರವುಗೊಳಿಸಬೇಕು. ಕೆರೆಯಂಗಳದಲ್ಲಿರುವ ದೇವಾಲಯಗಳಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳಂದು ಪ್ರಸಾದ ವಿತರಣೆಗೆ ನೀಡುವ ಪ್ಲಾಸ್ಟಿಕ್ ಕಪ್ಗಳನ್ನು ಕೆರೆಗೆ ಹಾಕುತ್ತಿದ್ದಾರೆ. ಕೂಡಲೇ ಇದನ್ನು ತಡೆಯಬೇಕು” ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.