- ಹೊಸದಾಗಿ ರಚನೆಯಾದ ಸರ್ಕಾರ ಈ ಬಿಕ್ಕಟ್ಟನ್ನು ಅತ್ಯಂತ ತುರ್ತಾಗಿ ಪರಿಹರಿಸಬೇಕು
- ಹೊಸ ಮಾರ್ಗಸೂಚಿ ಮಟ್ಟವನ್ನು ಮೀರಿರುವ ವಾಯು ಮಾನವನ ಆರೋಗ್ಯಕ್ಕೆ ಅಪಾಯಕಾರಿ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಓ) ನಿಗದಿಪಡಿಸಿದ ಸುರಕ್ಷಿತ ಮಟ್ಟಕ್ಕಿಂತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 5.8 ಪಟ್ಟು ವಾಯು ಗುಣಮಟ್ಟ ಕಳಪೆಯಾಗಿದೆ ಎಂದು ಗ್ರೀನ್ಪೀಸ್ ಇಂಡಿಯಾ ವರದಿ ಮಾಡಿದೆ.
ಈ ಬಗ್ಗೆ ಗ್ರೀನ್ಪೀಸ್ ಇಂಡಿಯಾ ಒಂದು ವರ್ಷದ ಅವಧಿಯ ಅಧ್ಯಯನ ಮಾಡಿದ್ದು, ‘ಸ್ಪೇರ್ ದಿ ಏರ್’ ಎಂಬ ಶೀರ್ಷಿಕೆಯ ವರದಿ ನೀಡಿದೆ. ಸೆಪ್ಟೆಂಬರ್ 2021 ರಿಂದ ಸೆಪ್ಟೆಂಬರ್ 2022 ರವರೆಗಿನ ಮಾಹಿತಿಯನ್ನು ವಿಶ್ಲೇಷಿಸಿದೆ.
“ಇತ್ತೀಚಿನ ಡಬ್ಲೂಎಚ್ಓ ಮಾರ್ಗಸೂಚಿಗಳಿಗಿಂತ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟವು ಅಪಾಯಕಾರಿ ಹಂತದಲ್ಲಿದೆ. ಗಾಳಿಯ ಗುಣಮಟ್ಟವೂ ನಿರಂತರವಾಗಿ ಹದಗೆಡಲು ಹೆಚ್ಚಾಗಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಡಬ್ಲ್ಯುಎಚ್ಒ ನೀಡಿದ ಮಾರ್ಗಸೂಚಿಗಳಿಗಿಂತ ಐದು ಪಟ್ಟು ಕೆಟ್ಟದಾಗಿರುವ ಗಾಳಿಯಲ್ಲಿ ಬೆಂಗಳೂರಿನವರು ಉಸಿರಾಡುತ್ತಿದ್ದಾರೆ” ಎಂದು ಗ್ರೀನ್ಪೀಸ್ ಇಂಡಿಯಾ ಹೇಳಿದೆ.
“ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ಘನ ಮೀಟರ್ಗೆ 5 ಮೈಕ್ರೋಗ್ರಾಂ ಅನ್ನು ಸುರಕ್ಷಿತ ಮಟ್ಟವಾಗಿ ಇರಿಸಿದೆ. ಆದರೆ, ಬೆಂಗಳೂರಿನ ಗಾಳಿಯಲ್ಲಿ ಕಣದಲ್ಲಿ ವಾರ್ಷಿಕ ಸರಾಸರಿ ಪ್ರತಿ ಘನ ಮೀಟರ್ಗೆ 29.01 ಮೈಕ್ರೋಗ್ರಾಂ ಮಾಲಿನ್ಯವಿದೆ. 24ಗಂಟೆಗಳ ಸಾಂದ್ರತೆಯು 283 ದಿನಗಳಲ್ಲಿ ಪ್ರತಿ ಘನ ಮೀಟರ್ಗೆ 60 ಮೈಕ್ರೋಗ್ರಾಂಗಿಂತ ಹೆಚ್ಚು. ಇದು ಡಬ್ಲ್ಯುಎಚ್ಒ ನಿಗದಿಪಡಿಸಿದ ಸುರಕ್ಷಿತ ಮಟ್ಟಗಳಿಗಿಂತ 5.8 ಪಟ್ಟು ಹೆಚ್ಚಾಗಿದೆ” ಎಂದು ಹೇಳಿದೆ.
“ಬೆಂಗಳೂರಿನ ಜನರು ಅಪಾಯಕಾರಿ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂಬ ಕಠೋರ ವಾಸ್ತವವನ್ನು ಮತ್ತೊಮ್ಮೆ ಈ ವರದಿ ತಿಳಿಸಿಕೊಟ್ಟಿದೆ. ವಾಹನಗಳ ಹೊರಸೂಸುವಿಕೆಯು ನಗರದಲ್ಲಿ 2.5ಮಾಲಿನ್ಯದ ಮಟ್ಟ ಮತ್ತು ಸಾರಜನಕ ಡೈ ಆಕ್ಸೈಡ್(NO2) ಸರಾಸರಿ ಸಾಂದ್ರತೆಯು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿದೆ. ಹೊಸದಾಗಿ ರಚನೆಯಾದ ಸರ್ಕಾರವು ಈ ಬಿಕ್ಕಟ್ಟನ್ನು ಅತ್ಯಂತ ತುರ್ತಾಗಿ ಪರಿಹರಿಸಬೇಕು” ಎಂದು ಗ್ರೀನ್ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಹೇಳಿದರು.
ಬೆಂಗಳೂರಿನ ಹೊರತಾಗಿ, ಭೋಪಾಲ್, ಚೆನ್ನೈ, ಕೊಚ್ಚಿ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ಪಾಟ್ನಾ ಮತ್ತು ಪುಣೆಯಲ್ಲೂ ಅಧ್ಯಯನ ನಡೆಸಲಾಗಿದೆ. ಮೂರು ಪ್ರಮುಖ ಮಾಲಿನ್ಯಕಾರಕಗಳಾದ PM 2.5, PM10 ಮತ್ತು NO2 ಕಳಪೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯುವಕನ ಕಿರುಕುಳಕ್ಕೆ ಬೇಸತ್ತು ಠಾಣೆ ಮೆಟ್ಟಿಲೇರಿದ ಯುವತಿ
“2021ರಲ್ಲಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಾಯು ಮಾಲಿನ್ಯದ ಹೆಚ್ಚುತ್ತಿರುವ ಪುರಾವೆಗಳೊಂದಿಗೆ, ಡಬ್ಲ್ಯುಎಚ್ಒ ಎಲ್ಲ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳ ಮಟ್ಟವನ್ನು ಕೆಳಕ್ಕೆ ಸರಿಹೊಂದಿಸುವ ವ್ಯವಸ್ಥಿತ ಕೆಲಸವನ್ನು ನಡೆಸಿತು. ಹೊಸ ಮಾರ್ಗಸೂಚಿ ಮಟ್ಟವನ್ನು ಮೀರುವುದು ಮಾನವನ ಆರೋಗ್ಯಕ್ಕೆ ಅಪಾಯಕಾರಿ” ಎಂದು ತಿಳಿಸಿದೆ.
“ತೀವ್ರವಾದ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅಕಾಲಿಕ ಮರಣ, ಆಸ್ತಮಾ, ಅವಧಿಪೂರ್ವ ಜನನ, ಕಡಿಮೆ ಜನನ ತೂಕ, ಖಿನ್ನತೆ, ಸ್ಕಿಜೋಫ್ರೇನಿಯಾ, ಮಧುಮೇಹ, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ” ಎಂದು ಹೇಳಿದೆ.