ಖಾಸಗಿ ಕಟ್ಟಡವೊಂದಕ್ಕೆ 23 ಕಿಲೋ ವಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲು ₹3.5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಅಧಿಕಾರಿ ಹಾಗೂ ಆತನ ಸಹಚರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಸ್ಕಾಂನ ಜಯನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧನಂಜಯ ವಿ ಮತ್ತು ಆತನ ಸಹಚರ ಸೈಯದ್ ನಿಜಾಮ್ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಭರತ್ ಕುಮಾರ್ ಎಂಬ ಎಲೆಕ್ಟ್ರಿಕ್ ಕಾಮಗಾರಿಗಳ ಗುತ್ತಿಗೆದಾರ ಶಂಕರ್ ಅವರ ನಿವಾಸದಲ್ಲಿ ವಿದ್ಯುತ್ ಕಾಮಗಾರಿಯ ಹೊಣೆ ಹೊತ್ತಿದ್ದರು. ಜಯನಗರದ 8ನೇ ಬ್ಲಾಕ್ನಲ್ಲಿರುವ ಶಂಕರ್ ಅವರ ನಿವಾಸಕ್ಕೆ 23 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ನೀಡಲು ಬೆಸ್ಕಾಂ ಜಯನಗರ ಉಪವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಮಂಜೂರಾತಿ ನೀಡಲು ಬೆಸ್ಕಾಂ ಎಇಇ ಧನಂಜಯ ಅವರು ₹13 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾತಿನಂತೆ ಮೊದಲ ಕಂತಿನಲ್ಲಿ ₹3.5 ಲಕ್ಷವನ್ನು ನೀಡುವಂತೆ ಅರ್ಜಿದಾರರಿಗೆ ಎಇಇ ತಿಳಿಸಿದ್ದರು.
ಲೋಕಾಯುಕ್ತ ಬೆಂಗಳೂರು ನಗರ ಘಟಕದ ಎಸ್ಪಿ ಕೆ.ವಿ ಅಶೋಕ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ ಕೆ, ವಿಜಯಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ
ಲಂಚ ಬೇಡಿಕೆ ಬಗ್ಗೆ ಶಂಕರ್ ಪರವಾಗಿ ಕುಮಾರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕುಮಾರ್ ಅವರಿಗೆ ಮೊದಲ ಕಂತಿನ ಹಣವನ್ನು ನೀಡಲು ಸೂಚನೆ ನೀಡಿದ್ದರು. ಬುಧವಾರ ಸಂಜೆ 4 ಗಂಟೆಗೆ ಮುಂಗಡ ಹಣ ನೀಡಲು ಜಯನಗರದ ಬೆಸ್ಕಾಂ ಕಚೇರಿಗೆ ಕುಮಾರ್ ಭೇಟಿ ನೀಡಿದ್ದರು. ಧನಂಜಯ ತನ್ನ ಸಹಚರ ನಿಜಾಮ್ನನ್ನು ಹಣ ಪಡೆಯಲು ನಿಯೋಜಿಸಿದ್ದನು. ನಿಜಾಮ್ ಹಣವನ್ನು ಸ್ವೀಕರಿಸಿದಾಗ ಲೋಕಾಯುಕ್ತ ಪೊಲೀಸರು ಧನಂಜಯ ಹಾಗೂ ಆತನ ಸಹಚರನನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.