ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಮಹತ್ವದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಘೋಷಿಸಿದೆ. ಆ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಚಿತ್ರದುರ್ಗದಲ್ಲಿರುವ ಸಂಸದ ಎ ನಾರಾಯಣಸ್ವಾಮಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಮೂರು ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅವರ ಧರಣಿ 3ನೇ ದಿನಕ್ಕೆ ಕಾಲಿಟ್ಟಿದೆ.
ಮೂರು ದಿನಗಳಿಂದ ರೈತರು ನಾರಾಯಣಸ್ವಾಮಿ ಅವರ ಕಚೇರಿಯ ಬಾಗಿಲಲ್ಲೇ ರೈತರು ಮಲಗಿದ್ದರು. ಸಂಸದರ ಕಚೇರಿಯ ಮುಂದಿರುವ ಬೆಂಚುಗಳು ಕೂಡಾ ರೈತರಿಗೆ ಮಲಗುವ ತಾಣವಾಗಿದ್ದವು. ರೈತರ ಪ್ರತಿಭಟನೆಗಾಗಿ ಅನೇಕರು ಅಕ್ಕಿ, ಬೇಳೆ, ಎಣ್ಣೆ, ತರಕಾರಿ, ದಿನಸಿ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ್ದಾರೆ.
ಕಚೇರಿಯಿಂದ ಸ್ವಲ್ಪ ದೂರದಲ್ಲಿ ಧರಣಿ ನಡೆಸುವಂತೆ ಪೊಲೀಸರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಮಾಡುತ್ತಿರುವ ಧರಣಿಯಿಂದಾಗಿ ಜಿಲ್ಲಾ ಪಂಚಾಯತಿ ಕೆಲಸಗಳಿಗೆ ತೊಂದರೆ ಆಗಬಾರದೆಂದು ರೈತರು ಧರಣಿ ಸ್ಥಳವನ್ನು ಜಿಲ್ಲಾ ಪಂಚಾಯತಿ ಪ್ರವೇಶ ದ್ವಾರಕ್ಕೆ ಸ್ಥಳಾಂತರಿಸಿದ್ದಾರೆ.
ಧರಣಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, “ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ತಲೆದೋರಿದೆ. ಇದಕ್ಕೆ ಶಾಶ್ವತ ಪರಿಹಾರ ಭದ್ರಾಮೇಲ್ದಂಡೆ ಯೋಜನೆಯಾಗಿದೆ. ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರೂ ಆಗಿರುವ ಎ.ನಾರಾಯಣಸ್ವಾಮಿ ಅವರಿಗೆ ಎರಡು ತಿಂಗಳ ಹಿಂದೆಯೇ ಅನುದಾನ ಬಿಡುಗಡೆಗಾಗಿ ಸತ್ಯಾಗ್ರಹ ನಡೆಸಿ, ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದೆವು. ಆದರೂ, ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಜೆಟ್ನಲ್ಲಿ ಘೋಷಣೆ ಮಾಡಿದಂತೆ, ಕೇಂದ್ರ ಸರ್ಕಾರ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಾಗಿತ್ತು. ತುರ್ತಾಗಿ ಕಾಮಗಾರಿ ಮುಗಿಯಬೇಕಿತ್ತು. ಕಾಮಗಾರಿಯಲ್ಲಿ ಎಲ್ಲೆಲ್ಲಿ ಸಮಸ್ಯೆ ಇದೆ ಗಮನಿಸಿ ಸರಿಪಡಿಸಬೇಕಾಗಿತ್ತು. ಆದರೆ, ಯಾವುದನ್ನೂ ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಮಾಡಲಿಲ್ಲ. ನಮ್ಮ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗುತ್ತಿದೆ. ಅನುದಾನ ಬಿಡುಗಡೆಯಾಗಿ ಜಿಲ್ಲೆಗೆ ನೀರು ಹರಿಯುವವರೆಗೆ ಧರಣಿಯಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂದು ಪುನರುಚ್ಚರಿಸಿದರು.
ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ರಾಮರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ಮಂಜುನಾಥ್, ಸಿದ್ದಪ್ಪ ಹಳಿಯೂರು, ಬಸವರಾಜಪ್ಪ, ನಾಗರಾಜ ರೆಡ್ಡಿ, ಬಿ.ಲೋಕಣ್ಣ, ಮಂಜಣ್ಣ, ಶರಣಪ್ಪ, ಪ್ರಸನ್ನ, ಪರಮಶಿವಪ್ಪ ಮತ್ತಿತರರು ಭಾಗವಹಿಸಿದ್ದರು.
ಮಂಗಳವಾರ ಬೆಳಗ್ಗೆ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಅವರಿಗೆ ಕರೆ ಮಾಡಿ ನಾರಾಯಣಸ್ವಾಮಿ ಮಾತನಾಡಿದ್ದಾರೆ ಎನ್ನಲಾಗಿದೆ. “ಅಧಿವೇಶನ ಇರುವುದರಿಂದ ಸ್ಥಳಕ್ಕೆ ಬರಲಾಗಿಲ್ಲ. ಅಗತ್ಯ ಕೆಲಸಗಳನ್ನು ಮಾಡುತ್ತೇವೆ. ಅನುದಾನ ಬಿಡುಗಡೆಗೆ ಸಚಿವರೊಂದಿಗೆ ಚರ್ಚಿಸುತ್ತೇನೆ” ಎಂದು ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.