ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಮತ್ತು ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಆಜಾದ್ ಅವರ ಬೆಂಗಾವಲು ವಾಹನದ ಮೇಲೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಅವರ ಬೆನ್ನಿಗೆ ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಜಾದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ದಾಳಿ ನಡೆದಾಗ ಕಾರಿನೊಳಗೆ ತನ್ನ ಸಹೋದರ ಸೇರಿದಂತೆ ಐವರು ಇದ್ದೆವು. ದಾಳಿ ನಡೆಸಿದವರ ಬಗ್ಗೆ ನನಗೆ ಚೆನ್ನಾಗಿ ನೆನಪಿಲ್ಲ. ಆದರೆ ನನ್ನೊಂದಿಗೆ ಇದ್ದವರು ಅವರನ್ನು ಗುರುತಿಸಿದ್ದಾರೆ. ಅವರ ಕಾರು ಸಹರಾನ್ಪುರದ ಕಡೆಗೆ ಹೊರಟಿತು. ನಾವು ಯು-ಟರ್ನ್ ತೆಗೆದುಕೊಂಡೆವು” ಎಂದು ಆಜಾದ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
“ಭೀಮ್ ಆರ್ಮಿ ಮುಖ್ಯಸ್ಥ ಮತ್ತು ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಅವರ ಮೇಲೆ ಸಹರಾನ್ಪುರದಲ್ಲಿ ನಡೆದ ಮಾರಣಾಂತಿಕ ದಾಳಿಯು ಬಹುಜನ ಮಿಷನ್ ಆಂದೋಲನವನ್ನು ನಿಲ್ಲಿಸುವ ಹೇಡಿತನದ ಕೃತ್ಯವಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಚಂದ್ರಶೇಖರ್ ಆಜಾದ್ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು” ಎಂದು ಭೀಮ್ ಆರ್ಮಿ ಪ್ರಕಟಣೆಯಲ್ಲಿ ತಿಳಿಸಿದೆ.