ವಿರೋಧದ ನಡುವೆಯೂ ಪ್ರೀತಿ ಮುಂದುವರೆಸಿದ ಪ್ರೇಮಿಗಳನ್ನು ಗುಂಡಿಕ್ಕಿ ಕೊಂದ ಪೋಷಕರು ಮೊಸಳೆಯಿರುವ ನದಿಗೆ ಎಸೆದ ಆಘಾತಕಾರಿ ಘಟನೆ ಮಧ್ಯ ಪ್ರದೇಶ ದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿದಂತೆ ಮಧ್ಯ ಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯ ಅಂಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ವಾರಗಳ ಹಿಂದೆ ಯುವತಿಯ ಪೋಷಕರು ಈ ಕೃತ್ಯ ಎಸಗಿದ್ದು, ಯುವತಿಯ ಪೋಷಕರಿಗೆ ಅವರ ಕೆಲವು ಸಂಬಂಧಿಕರೂ ಸಹಾಯ ಮಾಡಿದ್ದರು ಎಂಬ ವಿಚಾರ ಬಯಲಾಗಿದೆ.
ಮಧ್ಯ ಪ್ರದೇಶ ದ ಮೊರೆನಾ ಜಿಲ್ಲೆಯ ರತ್ನಬಸೈ ಗ್ರಾಮದ 18 ವರ್ಷ ವಯಸ್ಸಿನ ಯುವತಿ ಶಿವಾನಿ ತೋಮರ್, ತಮ್ಮ ಪಕ್ಕದ ಗ್ರಾಮವಾದ ಬಲುಪುರ ನಿವಾಸಿ 21 ವರ್ಷದ ರಾಧೆಶ್ಯಾಂ ತೋಮರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಒಂದೇ ಜಾತಿಯವರಾಗಿದ್ದರೂ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಕೊಟ್ಟಿರಲಿಲ್ಲ. ಇಷ್ಟಾದರೂ ಹೆತ್ತವರ ಮಾತು ಕೇಳದೆ ಪ್ರೇಮಿಗಳು ತಮ್ಮ ಪ್ರೇಮ ಮುಂದುವರೆಸಿದ್ದರು.
ಈ ಸುದ್ದಿ ಓದಿದ್ದೀರಾ? ಖುಷ್ಬು ವಿರುದ್ಧ ‘ಹಳೆಯ ಪಾತ್ರೆ’ ಹೇಳಿಕೆ; ಡಿಎಂಕೆ ವಕ್ತಾರ ಉಚ್ಚಾಟನೆ
ಇದರಿಂದ ಆಕ್ರೋಶಗೊಂಡ ಯುವತಿಯ ಪೋಷಕರು ಯುವಕ ಮತ್ತು ಯುವತಿ ಇಬ್ಬರು ಒಟ್ಟಿಗೆ ಇದ್ದಾಗ ಅವರನ್ನು ಸೆರೆ ಹಿಡಿದು ಇಬ್ಬರ ಮೇಲೂ ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ಇಬ್ಬರ ಶವಕ್ಕೂ ಭಾರವಾದ ಕಲ್ಲುಗಳನ್ನು ಕಟ್ಟಿ, ಮೊಸಳೆಗಳು ಹೆಚ್ಚಾಗಿರುವ ಚಂಬಲ್ ನದಿಯಲ್ಲಿ ಶವಗಳನ್ನು ಎಸೆದಿದ್ದಾರೆ. ಈ ವಿಷಯವನ್ನು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ಧಾರೆ.
ಈ ನದಿಯಲ್ಲಿ ಮೊಸಳೆಗಳ ಓಡಾಟ ವಿಪರೀತ ಇರುವ ಕಾರಣ, ಶವಗಳನ್ನು ಮೊಸಳೆಗಳು ತಿನ್ನಲಿ ಎಂದು ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
2 ವಾರಗಳ ಬಳಿಕ ಈ ಕೊಲೆ ಕೃತ್ಯ ಬೆಳಕಿಗೆ ಬಂದ ಕೂಡಲೇ ಮಧ್ಯ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಈಜುಗಾರರನ್ನು ಸಂಪರ್ಕ ಮಾಡಿದ ಪೊಲೀಸರು, ಇಬ್ಬರ ಮೃತದೇಹವನ್ನು ಪತ್ತೆ ಮಾಡಬೇಕೆಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜೂನ್ 3 ರಿಂದ ಇಬ್ಬರು ನಾಪತ್ತೆಯಾಗಿದ್ದರು. ಯುವಕ ರಾಧೆಶ್ಯಾಂ ತೋಮರ್ನ ಕುಟುಂಬಸ್ಥರು ಶಿವಾನಿ ತೋಮರ್ ಪೋಷಕರ ವಿರುದ್ಧ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಶಿವಾನಿ ತೋಮರ್ ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಅಮಾನುಷ ಕೃತ್ಯ ಬಯಲಾಗಿದೆ.