ಬಿಜೆಪಿ ಹೆಸರನ್ನು ಬಳಸಿಕೊಂಡು ಸಂಸದ ಪ್ರತಾಪ್ ಸಿಂಹ ತಲೆಹರಟೆ ಮಾಡುತ್ತಿದ್ದಾರೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚೆಯೇ ಆಗದಿದ್ದರೂ, ಮಹಿಷ ದಸರಾಗೆ ಬಿಜೆಪಿ ಹೆಸರಿನಲ್ಲಿ ಅಡ್ಡಿ ಮಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ದೂರ ಇಡಬೇಕು. ಮಹಿಷ ದಸರಾ ನಡೆಸಲು ಸರ್ಕಾರ ಮತ್ತು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ಗಿರಿಧರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಂವಿಧಾನವು ಎಲ್ಲರಿಗೂ ಧಾರ್ಮಿಕ ಹಕ್ಕನ್ನು ನೀಡಿದೆ. ಅದರಂತೆ, ಎಲ್ಲರಿಗೂ ತಮ್ಮ ಧಾರ್ಮಿಕ ಆಚರಣೆಗೆ ಅವಕಾಶವಿದೆ. ಮಹಿಷ ದಸರಾ ನಿಲ್ಲಿಸಬೇಕೆಂದು ಹೇಳಲು ಸಂಸದ ಪ್ರತಾಪ್ ಸಿಂಹ ಯಾರು? ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಮಹಿಷ ದಸರಾವನ್ನು ವಿರೋಧಿಸಬೇಕೆಂಬ ತೀರ್ಮಾನವೇ ಆಗಿಲ್ಲ. ಮಹಿಷ ದಸರಾಗೆ ಬಿಎಪಿಯ ಸಂಪೂರ್ಣ ಬೆಂಬಲ ಇದೆ” ಎಂದು ಹೇಳಿದ್ದಾರೆ.
“ಬಿಜೆಪಿ ಶಾಸಕ ಶ್ರೀವತ್ಸ ಅವರಿಗೂ ಮಹಿಷ ದಸರಾವನ್ನು ವಿರೋಧಿಸುವುದು ಇಷ್ಟವಿಲ್ಲ. ತಲಹರಟೆ ಪ್ರತಾಪ್ ಸಿಂಹ ಅವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದ ಶ್ರೀವತ್ಸ ಅವರು ವಿರೋಧ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹಗೆ ಮೈಸೂರಿನ ಇತಿಹಾಸ ಗೊತ್ತಿಲ್ಲ. ಮಹಿಷ ಕೆಟ್ಟ ವ್ಯಕ್ತಿಯಾಗಿದ್ದರೆ ಮೈಸೂರಿನ ಮಹರಾಜರು ಏಕೆ ಮಹಿಷನ ದೊಡ್ಡ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಅಂತಹ ಪ್ರತಿಮೆಯನ್ನೇ ಅಪದ್ಧ, ಅಸಹ್ಯ ಎಂದು ಹೇಳುವ ಮೂಲಕ ಮೈಸೂರು ಮಹರಾಜರಿಗೆ ಅವಮಾನ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಜಗಜೀವನ್ ರಾಮ್ ಚರ್ಮ ಕೈಗಾರಿಕಾ ತರಬೇತಿ ಕೇಂದ್ರ ನಡೆಸದಂತೆ ಸವರ್ಣೀಯರ ತಡೆ; ಆರೋಪ
“ಪ್ರತಾಪ್ ಸಿಂಹನಿಗೂ ಮೈಸೂರಿಗೂ ಯಾವ ಸಂಬಂಧವಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂಬ ಕಾರಣಕ್ಕಾಗಿ 2014ರಲ್ಲಿ ಇವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ಗೆದ್ದ ನಂತರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಡೆದುಕೊಂಡು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಚಾಮುಂಡಿ ಬೆಟ್ಟವನ್ನು ಪ್ರತಾಪ್ ಸಿಂಹ ಗುತ್ತಿಗೆ ಪಡೆದಿಲ್ಲ. ಅಲ್ಲಿಗೆ ಎಲ್ಲ ಧರ್ಮದವರು ಹೋಗುತ್ತಾರೆ. ಈ ಹಿಂದೆ, ಪ್ರತಾಪ್ ಸಿಂಹ ಮುಸಲ್ಮಾನರ ವಿರುದ್ಧ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಹಿನ್ನಡೆಯುಂಟು ಮಾಡಿದ್ದರು. ಈಗ ದಲಿತರ ವಿರುದ್ಧ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.