ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ದ ಪಕ್ಷದ ವರಿಷ್ಟರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಮಂಡ್ಯದ ಅಂಚೆ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಅಂಚೆ ಮೂಲಕ ಪ್ರತಿಭಟನಾಕಾರರು ಪತ್ರ ಕಳಿಸಿದ್ದಾರೆ. “ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಶಕುನಿ ಎಂದು ಟೀಕೆ ಮಾಡಿರುವ ಯತ್ನಾಳ್ಗೆ ಪಕ್ಷದ ವರಿಷ್ಠರು ತಿಳುವಳಿಕೆ ಹೇಳಬೇಕು. ಇಲ್ಲದಿದ್ದರೆ ಯತ್ನಾಳ್ ಅವರನ್ನು ಸರಿದಾರಿಗೆ ತರಲು ಯಡಿಯೂರಪ್ಪರ ಅನುಯಾಯಿಗಳಿಗೆ ಅವಕಾಶ ನೀಡಬೇಕು” ಎಂದಿದ್ದಾರೆ.
ಯತ್ನಾಳ್ ವರ್ತನೆಯಿಂದ ಲೋಕಸಭಾ ಚುನಾವಣೆ ಮೇಲೆ ಹೊಡೆತ ಬೀಳಲಿದೆ, ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಎಸ್. ಶಿವಕುಮಾರ್ ಆರಾಧ್ಯ, ಸಾತನೂರು ಯೋಗೇಶ್, ಎಂ.ಎಸ್ ನಂದೀಶ್, ಹೊಸಹಳ್ಳಿ ಶಿವು, ಎಚ್ ಕೆ ಮಂಜುನಾಥ್, ಸಿ.ಎಂ.ವಿಜಯಕುಮಾರ್, ಎಸ್ ಕೆ ನಾಗರಾಜು, ರೇವ ನಂಜುಂಡಸ್ವಾಮಿ ಇತರರಿದ್ದರು.