- ರಾಜೀನಾಮೆ ಕೊಡಲು ನಾನೇನು ಈಶ್ವರಪ್ಪ ಅಲ್ಲ, ನಾನು ಶೆಟ್ಟರ್
- ನನಗೆ ಟಿಕೆಟ್ ತಪ್ಪಿಸಲು ಮತ್ತೊಬ್ಬ ಕೇಂದ್ರ ಸಚಿವರೂ ಕಾರಣ
ಈ ಬಾರಿಯ ಚುನಾವಣೆಯಲ್ಲಿ ನನಗೆ ಬಿಜೆಪಿಯ ಟಿಕೆಟ್ ಕೈ ತಪ್ಪಲು ಬಿ ಎಲ್ ಸಂತೋಷ್ ಅವರೇ ಕಾರಣ. ಅವರ ಹಿಂದೆ ಮತ್ತೊಬ್ಬ ವ್ಯಕ್ತಿ ಇದ್ದಾನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ.
ನನ್ನ ವಿರುದ್ಧ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿದರು. ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ನಡೆಸಿ ತಂತ್ರಗಾರಿಕೆ ಮಾಡಿತು. ಅವರಿಂದಲೇ ನನಗೆ ಟಿಕೆಟ್ ತಪ್ಪಿತು ಎಂದು ಅವರು ಹೇಳಿದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಮಂಗಳವಾರ ತವರು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿ, “ಕೆಲವು ವ್ಯಕ್ತಿಗಳು ಬಿಜೆಪಿಯಲ್ಲಿ ನನ್ನನ್ನು ತುಳಿಯಲು ಪ್ರಯತ್ನಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ಈ ಬಾರಿ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಮೇಲೆ ಪಕ್ಷಕ್ಕೆ ಅಷ್ಟು ಗೌರವವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬಹುದಿತ್ತು ಅಥವಾ ಕೇಂದ್ರಕ್ಕೆ ತೆಗೆದುಕೊಳ್ಳಬಹುದಾಗಿತ್ತು. ಆದರೆ, ಅವರಿಗೆ (ಬಿ.ಎಲ್ ಸಂತೋಷ್) ನನ್ನ ಮೇಲೆ ಕಣ್ಣಿತ್ತು. ನನ್ನನ್ನು ಪದೇ ಪದೇ ಅವಮಾನಿಸಿದರು. ಅಪಪ್ರಚಾರ ನಡೆಸಿದರು. ಕಡೆಗೆ ಟಿಕೆಟ್ ಕೊಡದೇ ಸತಾಯಿಸಿದರು” ಎಂದು ಆರೋಪಿಸಿದ್ದಾರೆ.
“ಹಲವು ದಿನಗಳಿಂದ ಬಿಜೆಪಿಯಲ್ಲಿ ಬಹಳ ವೇದನೆ ಅನುಭವಿಸುತ್ತಿದ್ದೆ. ಈಗ ಉಸಿರುಗಟ್ಟುವ ವಾತಾವರಣದಿಂದ ಹೊರಗೆ ಬಂದಿರುವೆ. ಜಗದೀಶ್ ಶೆಟ್ಟರ್ ಏನು ಎಂದು ಪಕ್ಷ ಅರ್ಥ ಮಾಡಿಕೊಳ್ಳಲಿಲ್ಲ. ಬಿಜೆಪಿ ಮತ್ತು ಜನಸಂಘದೊಂದಿಗೆ ನಮ್ಮ ಕುಟುಂಬ ಹೇಗೆ ಬೆರೆತಿತ್ತು ಎಂಬುದನ್ನು ಮರೆತು ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಒಂದು ಟಿಕೆಟ್ಗಾಗಿ ನಾನು ಅವರನ್ನು ಅಂಗಲಾಚಬೇಕಾ? ನನ್ನ ಹಿರಿತನಕ್ಕೂ ಗೌರವ ಬೇಡವಾ?” ಎಂದು ಬೇಸರ ವ್ಯಕ್ತಪಡಿಸಿದರು.
“ಸೆಂಟ್ರಲ್ ಕ್ಷೇತ್ರಕ್ಕೆ ನನ್ನ ಹೆಸರು ಅಂತಿಮವಾಗಿ ಹೋಗಿದೆ. ಆದರೆ, ಫಸ್ಟ್ ಲಿಸ್ಟ್ ಬಂದಾಗ ನನ್ನ ಹೆಸರು ಇರಲಿಲ್ಲ. ಸ್ಕ್ರಿನಿಂಗ್ ಕಮಿಟಿಯಲ್ಲೂ ನನ್ನ ಹೆಸರೇ ಇದೆ. ಆದರೆ ಕೊನೆಗೆ ನನ್ನ ಹೆಸರು ತೆಗೆದಿದ್ದಾರೆ. ಅವಾಗಲೂ ಬೇಜಾರು ಆಗಲಿಲ್ಲ. ಅದನ್ನು ಬಿಟ್ಟು ಏಕಾಏಕಿ ಕಾಲ್ ಮಾಡಿ ನಿವೃತ್ತಿ ಘೋಷಿಸಿ ಎಂದರೆ ಹೇಗೆ? ನನ್ನನ್ನು ಈಶ್ವರಪ್ಪ ಅನ್ಕೊಂಡಿದ್ದಾರಾ ರಾಜೀನಾಮೆ ಕೊಡಲು? ಮನಸ್ಸಿಗೆ ನೋವಾಗಿ ಬಿಜೆಪಿಗೆ ರಾಜೀನಾಮೆ ನೀಡಿರುವೆ” ಎಂದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಜೋಶಿ ಹಣಿಯಲು ಖೆಡ್ಡಾ ತೋಡಿ ಅಖಾಡಕ್ಕಿಳಿದ ಶೆಟ್ಟರ್
ಧರ್ಮೇಂದ್ರ ಪ್ರಧಾನ್ ಅವರು ಕಾಲ್ ಮಾಡಿ, “ನಿಮಗೆ ಟಿಕೆಟ್ ನೀಡುತ್ತಿಲ್ಲ. ನೀವು ಇದನ್ನು ಸ್ವೀಕರಿಸಬೇಕು. ನಿಮಗೆ ರಾಜೀನಾಮೆ ನೀಡಿರುವ ಸಿದ್ಧ ಲೆಟರ್ ಕಳುಹಿಸಿದ್ದೇವೆ. ಅದಕ್ಕೆ ಸಹಿ ಮಾಡಿ ಕೊಡ್ರಿ” ಎಂದಷ್ಟೇ ಹೇಳಿ ಕಾಲ್ ಕಟ್ ಮಾಡಿದರು.
“ಒಬ್ಬ ಹಿರಿಯ ನಾಯಕನನ್ನು ನಡೆಸಿಕೊಳ್ಳುವ ರೀತಿ ಇದೇನಾ? ನನಗೆ ಟಿಕೆಟ್ ಕೊಡದಿರಲು ನಿರ್ಧರಿಸಿದಾಗ ಸೌಜನ್ಯಕ್ಕಾಗಿ ಕರೆದು ಮೊದಲೇ ವಿಷಯ ತಿಳಿಸಬಹುದಿತ್ತಲ್ಲ. ಉದ್ದೇಶಪೂರ್ವಕವಾಗಿ ಅವಮಾನ ಮಾಡಬೇಕು ಎಂದೇ ಹೀಗೆ ಮಾಡಿದ್ದಾರೆ. ಒಬ್ಬ ಸಣ್ಣ ಹುಡುಗನ ಜೊತೆ ನಡೆದುಕೊಳ್ಳುವ ಹಾಗೆ ನನ್ನ ಜೊತೆ ನಡೆದುಕೊಂಡಿದ್ದಾರೆ” ಎಂದರು.
“ನಾನು ಯಾವಾಗ ಪಕ್ಷ ಬಿಡುತ್ತೇನೆ ಎಂದು ಹೇಳಿದೆನೋ ಅವಾಗ ರಾಜ್ಯಸಭೆ ಸ್ಥಾನಮಾನ ನೀಡುತ್ತೇವೆ ಎಂದರು. ಆದರೆ, ನಾನು ಕೇಳಿದ್ದು, ಕನಿಷ್ಠ ಆರು ತಿಂಗಳಾದ್ರೂ ಶಾಸಕನಾಗಿರುವೆ, ಟಿಕೆಟ್ ನೀಡಿ ಎಂದು. ನನ್ನ ಮನವಿಯನ್ನು ಪಕ್ಷದ ನಾಯಕರು ಗೌರವಿಸಲಿಲ್ಲ. ಒಂದು ಟಿಕೆಟ್ಗಾಗಿ ನಾನು ಇಷ್ಟು ಪರಿತಪಿಸಬೇಕಾ? ಮನಸ್ಸಿಗೆ ನೋವಾಗಿ ಪಕ್ಷ ತೊರೆದಿರುವೆ” ಎಂದರು.
“ಮೈಸೂರಿನಲ್ಲಿ ರಾಮ್ದಾಸ್ ಅವರಿಗೂ ಟಿಕೆಟ್ ತಪ್ಪಲು ಬಿ ಎಲ್ ಸಂತೋಷ್ ಕಾರಣ. ಸಂತೋಷ್ ಅವರಿಗೆ ರಾಮ್ದಾಸ್ ಆತ್ಮೀಯರು ಅಲ್ಲ. ಅಲ್ಲಿ ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಶ್ರೀವತ್ಸ ಸಂತೋಷ್ಗೆ ಆತ್ಮೀಯರು. ಬಾದಾಮಿಯಲ್ಲೂ ಹೀಗೇ ಆಗಿದೆ. ಬಾದಾಮಿಯನ್ನು ಈ ಸಲ ಬಿಜೆಪಿ ಕಳೆದುಕೊಳ್ಳಲಿದೆ” ಎಂದು ಭವಿಷ್ಯ ನುಡಿದರು.