- ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಘೋಷಿತ ಬಿಎಸ್ಪಿ ಅಭ್ಯರ್ಥಿ
- ರಾಜೀನಾಮೆ ಬೆನ್ನಲ್ಲೆ ಪಕ್ಷದಿಂದ ಉಚ್ಛಾಟನೆ ಮಾಡಿದ ರಾಜ್ಯಾಧ್ಯಕ್ಷ
ಬಹುಜನ ಸಮಾಜ ಪಕ್ಷವು ಕಾಂಗ್ರೆಸ್ ಪಕ್ಷಕ್ಕೆ ಮಾರಾಟವಾಗಿದ್ದು, ಆನೆ ಚಿಹ್ನೆ ತೋರಿಸಿ ಜನರ ಮತವನ್ನು ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ ಎಂದು ಹುಮನಾಬಾದ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಅಂಕುಶ ಗೋಖಲೆ ಆರೋಪಿಸಿದ್ದು, ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹುಮನಾಬಾದ್ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಂಕುಶ ಗೋಖಲೆ ಮಾತನಾಡಿ, “2008 ರಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಸೇರಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ದನಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಜನರ ನೋವಿಗೆ ಸ್ಪಂದಿಸಲು ಮುಂದಾಗಿದ್ದ ಕಾರಣ ಹಲವು ಕೇಸ್ಗಳು ನನ್ನ ಮೇಲಿವೆ. ಆದರೆ ಕಾನ್ಸಿರಾಮ್ ಅವರ ಸಿದ್ಧಾಂತ ಮೈಗೂಡಿಸಿಕೊಂಡ ನಾನು ಸ್ವಾಭಿಮಾನಕ್ಕಾಗಿ ಶ್ರಮಿಸಿದ್ದೇನೆ” ಎಂದು ಹೇಳಿದರು.
ಈ ಹಿಂದೆ ಹುಮನಾಬಾದ್ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಾಜ್ಯ ಬಹುಜನ ಸಮಾಜ ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿತು. ಆದರೆ, ಟಿಕೆಟ್ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆಸಿಕೊಂಡು ₹50 ಲಕ್ಷ ನೀಡಿದರೆ ನಿಮಗೆ ಟಿಕೆಟ್ ಕೊಡಲಾಗುವುದು ಇಲ್ಲದಿದ್ದರೆ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದು, ತುಂಬಾ ಬೇಸರ ಮೂಡಿಸಿತು” ಎಂದು ಗಂಭೀರ ಆರೋಪ ಮಾಡಿದರು.
ಬಿಎಸ್ಪಿ ಯಿಂದ ದಲಿತರ ಶೋಷಣೆ
“ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಕಾನ್ಸಿರಾಮ್ ಅವರ ಸಿದ್ಧಾಂತ ಮೇಲೆ ಸ್ಥಾಪಿತವಾದ ಬಹುಜನ ಸಮಾಜ ಪಾರ್ಟಿಯಲ್ಲಿ ಕಾನ್ಸಿರಾಮ್ ಅವರ ಯಾವುದೇ ಚಿಂತನೆಗಳು ಉಳಿದಿಲ್ಲ. ಬಿಎಸ್ಪಿ ನೀಲಿ ಧ್ವಜ ಮುಂದಿಟ್ಟು ದಲಿತರನ್ನು ಶೋಷಣೆಗೆ ಒಳಪಡಿಸುವ ಪಕ್ಷದಿಂದ ದೂರವಿರಿ” ಎಂದು ಮನವಿ ಮಾಡಿದರು.
“ಬಿಎಸ್ಪಿ ಸಿದ್ಧಾಂತಗಳನ್ನು ಗಾಳಿಗೆ ತೂರಿ ಚುನಾವಣೆ ಬಂದಾಗ ಮಾತ್ರ ಎದ್ದೇಳುವ ನಾಯಕರು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ. ಈ ಹಿಂದೆ ಹುಮನಾಬಾದ್ ಕ್ಷೇತ್ರದಿಂದ ನೀವೇ ಸ್ಪರ್ಧಿಸಿ ಎಂದು ಹೇಳಿ ಅಭ್ಯರ್ಥಿ ಘೋಷಿಸಿದ ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿದ್ಧಾರ್ಥ್, ರಾಜ್ಯ ಬಿಎಸ್ಪಿ ಅಧ್ಯಕ್ಷ ಕೃಷ್ಣಮೂರ್ತಿ, ಎಂ ಮುನಿಯಪ್ಪ ಸೇರಿದಂತೆ ಹಲವರು ನನಗೆ ₹50 ಲಕ್ಷ ಹಣ ಕೊಡುವಂತೆ ಕೇಳಿದರು. ಇದಕ್ಕೆ ಒಪ್ಪದ ನಾನು ಬಿ ಫಾರಂ ಪಡೆಯದೆ ವಾಪಸ್ ಬಂದಿದ್ದೇನೆ ಎಂದು ಹೇಳಿದರು.
“ಬಿಎಸ್ಪಿ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಈಗಾಗಲೇ ಮತಯಾಚನೆ ಮಾಡಿದ ನನಗೆ ಪಕ್ಷ ಮೋಸ ಮಾಡಿದೆ. ಜನಪರ ಸಿದ್ಧಾಂತ ಮೈಗೂಡಿಸಿಕೊಂಡ ನನಗೆ ಅತೀವ ನೋವಾಗಿದೆ. ಹೀಗಾಗಿ ಬಿಎಸ್ಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಮುಂದಿನ ತೀರ್ಮಾನ ತಿಳಿಸುವೆ” ಎಂದು ಹೇಳಿದರು.
ಬಿಎಸ್ಪಿ ಪಕ್ಷದಿಂದ ಉಚ್ಛಾಟನೆ
ಅಂಕುಶ ಗೋಖಲೆ ಬಿಎಸ್ಪಿ ನಾಯಕರ ಮೇಲೆ ಆರೋಪ ಮಾಡಿ, ರಾಜೀನಾಮೆ ನೀಡಿದ ಬೆನ್ನಲ್ಲೆ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಅಂಕುಶ್ ಗೋಖಲೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
“ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಮ್ಮ ಮಗ ಬೀದರ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸುತ್ತಿರುವುದರಿಂದ, ಬಹುಜನ ಸಮಾಜ ಪಾರ್ಟಿಯ ವತಿಯಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಸದಿರುವಂತೆ ನಮ್ಮ ರಾಜ್ಯ ಸಂಯೋಜಕರು ಮತ್ತು ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ವಿನಂತಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? : ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ‘ಡ್ಯಾಮೇಜ್’ ಆಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ಆಗ ಮಾರಸಂದ್ರ ಮುನಿಯಪ್ಪ ಅವರ ವಿನಂತಿಯನ್ನು ತಿರಸ್ಕರಿಸಿ, ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿ ಅಂಕುಶ್ ಗೋಖಲೆ ಹುಮನಾಬಾದ್ ಕ್ಷೇತ್ರದಿಂದ ಸ್ಪರ್ದಿಸುವುದು ನಿಶ್ಚಿತ ಎಂದು ಹೇಳಿದ್ದರು. ಇದರ ನಂತರ, ಸಿ ಎಂ ಇಬ್ರಾಹಿಂ ಮತ್ತು ಅವರ ಮಗನೊಂದಿಗೆ ಶಾಮೀಲಾದ ಅಂಕುಶ್ ಗೋಖಲೆ ಮತ್ತು ಮತ್ತೊಬ್ಬ ರಾಜ್ಯ ಕಾರ್ಯದರ್ಶಿ ಜಮೀಲ್ ಖಾನ್ರವರು ಬಹುಜನ ಸಮಾಜ ಪಕ್ಷದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ.
ಕಳೆದ ಕೆಲವಾರು ತಿಂಗಳುಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಅಂಕುಶ್ ಗೋಖಲೆ ಮತ್ತು ಜಮೀಲ್ ಖಾನ್ ಅವರಿಗೆ ಅನೇಕ ಬಾರಿ ಪಕ್ಷದ ವತಿಯಿಂದ ಎಚ್ಚರಿಸಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಅಂಕುಶ್ ಗೋಖಲೆ ಮತ್ತು ಜಮೀಲ್ ಖಾನ್ ಅವರನ್ನು ಈ ಕೂಡಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ” ಎಂದು ಆದೇಶ ಹೊರಡಿಸಲಾಗಿದೆ.