ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ನವದಗಿ ಗ್ರಾಮಗಳು ಆಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಗ್ರಾಮಗಳು ಹೆದ್ದಾರಿ ಸಮೀಪವೇ ಇದ್ದು, ಬಸ್ ತಂಗುದಾಣಗಳಿದ್ದರೂ ಸರ್ಕಾರಿ ಸಾರಿಗೆ ಬಸ್ಗಳು ನಿಲುಗಡೆ ನೀಡದೆ, ಹೋಗುತ್ತಿವೆ. ಹೀಗಾಗಿ, ನಿತ್ಯ ಗ್ರಾಮಗಳ ಜನರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸ್ಗಳ ನಿಲುಗಡೆ ಇಲ್ಲದ ಕಾರಣ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಿ ಬರುವುದೇ ಪ್ರಯಾಸವಾಗುತ್ತಿದೆ. ಹೀಗಾಗಿ, ಅವರ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವೃದ್ಧರು, ಮಹಿಳೆಯರು, ಮಕ್ಕಳು ರಸ್ತೆ ಬದಿಯಲ್ಲಿ ತಾಸು ಗಟ್ಟಲೆ ಬಸ್ಗಾಗಿ ಕಾಯುವ ಪರಿಸ್ಥಿತಿ ಇದೆ. ಯಾವುದೋ ಕೆಲವು ಬಸ್ಗಳಷ್ಟೇ ನಿಲ್ಲಿಸುತ್ತವೆ. ಕೆಲವು ಬಸ್ಗಳು ನಿಲ್ಲಿಸದೂ, ಅವುಗಳಲ್ಲಿ ಹತ್ತಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿರುತ್ತಾರೆ ಎಂದು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಬೀದರ್, ಹುಮನಾಬಾದ್ಗೆ ಹೋಗುವ ಸಾಕಷ್ಟು ಬಸ್ಗಳು ಗ್ರಾಮಗಳ ಮೂಲಕ ಹಾದು ಹೋಗುತ್ತವೆ. ಆದರೆ, ಅವು ಗ್ರಾಮಗಳಲ್ಲಿ ನಿಲ್ಲಿಸುವುದಿಲ್ಲ. ನಿಲ್ಲಿಸುವಂತೆ ಕೇಳಿದರೆ, ಸ್ಟಾಪ್ ಇಲ್ಲವೆಂದು ನಿರ್ವಾಹಕ, ಚಾಲಕರು ಹೇಳುತ್ತಾರೆ. ಪಕ್ಕದ ಹಳಿಖೇಡ್ (ಕೆ) ಗ್ರಾಮದಲ್ಲಿ ಇಳಿದು, 2 ಕಿ.ಮೀ ನಡೆದು ತಮ್ಮ ಹಳ್ಳಿಗಳಿಗೆ ಬರಬೇಕು ಎಂದು ಕಿಣ್ಣಿ ಸಡಕ್ ಗ್ರಾಮಸ್ಥರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚಿಕ್ಕಬಳ್ಳಾಪುರ | ಸ್ಮಶಾನ ಕಾರ್ಮಿಕರಿಂದ ಅಣುಕು ಶವಯಾತ್ರೆ – ಪ್ರತಿಭಟನೆ
“ಕೆಲವು ಸಿಟಿ ಬಸ್ಗಳು ಗ್ರಾಮದಲ್ಲಿ ನಿಲ್ಲಿಸುತ್ತವೆ. ಅದೂ ಸಂಜೆ ವೇಳೆ, ಒಂದೇ ಬಸ್ ಇರುವುದು. ಅದೂ ಸರಿಯಾಗಿ ಬರುವುದಿಲ್ಲ. ಆ ಬಸ್ ಬರದಿದ್ದರೆ, ಖಾಸಗಿ ವಾಹನಗಳ ಮೂಲಕ ಗ್ರಾಮಕ್ಕೆ ಬರಬೇಕು” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.