ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆಯಲ್ಲಿ ಬಂಧಿತ 80 ಮಂದಿ ರೈತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಬ್ಯಾಡಗಿ ಮೆಣಸಿನಕಾಯಿಗೆ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಗೊಳಿಸಬೇಕು. ಇದರಿಂದ ರೈತರಿಗೆ ಆರ್ಥಿಕ ಗ್ಯಾರಂಟಿ ದೊರೆಯಲಿದೆ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಆಗ್ರಹಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ರೈತರು ಸಾಕಷ್ಟು ಮೆಣಸಿನಕಾಯಿ ತಂದಿದ್ದರು. ಮಾರುಕಟ್ಟೆಯಲ್ಲಿ ₹20,000 ಇದ್ದ ಬೆಲೆ ದಿಢೀರ್ ₹12,000 ಕುಸಿತ ಕಂಡಿತು. ಇದು ರೈತರ ಆಕ್ರೋಶಕ್ಕೆ ಪ್ರಮುಖ ಕಾರಣವಾಯಿತು. ಇದರಿಂದ ಕಚೇರಿ ಮತ್ತು ವಾಹನಗಳಿಗೆ ಕಲ್ಲು ತೂರಿ, ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಇದು ಸರ್ಕಾರದ ವೈಫಲ್ಯ. ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಕೊಟ್ಟಿಲ್ಲ. ಸೂಕ್ತ ತಯಾರಿಯನ್ನು ಮಾಡಿಕೊಂಡಿಲ್ಲವಾದ್ದರಿಂದ ಇದಕ್ಕೆ ಸರ್ಕಾರವೇ ನೇರ ಹೊಣೆ” ಎಂದು ಕಿಡಿಕಾರಿದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆ ಪ್ರಕರಣ | ಬಂಧಿತ ರೈತರನ್ನು ಕೂಡಲೇ ಬಿಡುಗಡೆಗೊಳಿಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ pic.twitter.com/QTapndn2NZ
— eedina.com (@eedinanews) March 14, 2024
“ಗಲಾಟೆಯಲ್ಲಿ ರೈತರ ತಪ್ಪಿಲ್ಲ. ʼಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆʼ ಎಂದು ಸಚಿವ ಶಿವಾನಂದ ಪಾಟೀಲ್ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಹಾಕಲು ಹೋಗುತ್ತಿದ್ದಾರೆ. ಅದೆಲ್ಲವನ್ನೂ ಬಿಟ್ಟು ಈ ಹಿಂದೆ ಇದ್ದ ದರವನ್ನು(20 ಸಾವಿರ) ಮುಂದುವರಿಸಿ. ಬಂಧಿತ 80 ಮಂದಿ ರೈತರನ್ನು ಬಿಡುಗಡೆಗೊಳಿಸಬೇಕು” ಎಂದು ಒತ್ತಾಯ ಮಾಡಿದರು.
ಎಂಎಸ್ಪಿಯಿಂದ ರೈತರಿಗೆ ಆರ್ಥಿಕ ಗ್ಯಾರಂಟಿ: “ಸರ್ಕಾರ ಬ್ಯಾಡಗಿ ಮೆಣಸಿನಕಾಯಿಗೆ ಶಾಸನಬದ್ಧ, ನ್ಯಾಯಯುತ ಕನಿಷ್ಟ ಬೆಂಬಲ ನಿಗದಿಗೊಳಿಸಬೇಕು. ಇದರಿಂದ ರೈತರಿಗೆ ಆರ್ಥಿಕ ಗ್ಯಾರಂಟಿ ದೊರೆಯಲಿದೆ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಶಾಸನಬದ್ಧ ಎಂಎಸ್ಪಿ ನಿಗದಿಯಾಗದಿದ್ದಲ್ಲಿ ದೆಹಲಿ ಹೊರಾಟದಂತ ನಿರ್ಧಾರಕ್ಕೆ ಮುಂದಾಗುತ್ತೇವೆ” ಎಂದು ಎಚ್ಚರಿಸಿದರು.
ಎಚ್ ಎನ್ ವ್ಯಾಲಿ, ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಸಂಸ್ಕರಣೆಗೆ ಒತ್ತಾಯ : “ಸರ್ಕಾರ ಎಚ್ ಎನ್ ವ್ಯಾಲಿ, ಕೆಸಿ ವ್ಯಾಲಿ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಗಳಿಗೆ ಬಿಡುತ್ತಿದೆ. ಇದು ಅಪಾಯಕಾರಿ. ಆದ್ದರಿಂದ ಎಚ್ ಎನ್ ವ್ಯಾಲಿ, ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಸಂಸ್ಕರಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು” ಎಂದು ಇದೇ ವೇಳೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದೇಸು ಗೇಮು ಚವ್ಹಾಣ ಕಾಂಗ್ರೆಸ್ಗೆ ಮರು ಸೇರ್ಪಡೆ
ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡರುಗಳಾದ ಭಕ್ತರಹಳ್ಳಿ ಬೈರೇಗೌಡ, ನರಸಿಂಹ ರೆಡ್ಡಿ, ಮಂಜುನಾಥ್, ಚಿಂತಾಮಣಿ ಹಾಲು ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಮುಖಂಡರು ಇದ್ದರು.