- ಶನಿವಾರ ಸಂಜೆ 5 ಗಂಟೆಯಿಂದ ಎಕ್ಸ್ನಲ್ಲಿ ಅಭಿಯಾನ
- ರಾಜ್ಯಕ್ಕೆ ಪ್ರತ್ಯೇಕ ಬಾವುಟ ಹೊಂದಲು ಅವಕಾಶ ಇರಲಿ
ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ (ನ.11) ಸಂಜೆ 5 ಗಂಟೆಯಿಂದ ಸಾಮಾಜಿಕ ಜಾಲತಾಣ ಎಕ್ಸ್ ಅಭಿಯಾನ ಹಮ್ಮಿಕೊಂಡಿದೆ.
#ಕನ್ನಡಬಾವುಟ_ನಮ್ಮಗುರುತು #KannadaFlag_MyPride ಎಂಬ ಹ್ಯಾಶ್ ಟ್ಯಾಗ್ಗಳ ಅಡಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ.
“ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಕರ್ನಾಟಕ ಸರ್ಕಾರ ಈಗಾಗಲೇ ಭಾರತ ಒಕ್ಕೂಟ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಲಿದ್ದೇವೆ” ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕನ್ನಡಿಗರಿಗೆ ಕನ್ನಡ ಬಾವುಟ ಮೊದಲ ಗುರುತು. ಭಾರತ ಒಕ್ಕೂಟದ ಭಾಗವಾಗಿ ನಮ್ಮದೇ ಆದ ಬಾವುಟವೊಂದನ್ನು ಹೊಂದುವುದಕ್ಕೆ ಅವಕಾಶ ಇರಬೇಕು. ಈಗಾಗಲೇ ಕೋಟ್ಯಂತರ ಕನ್ನಡಿಗರು ಕನ್ನಡ ಬಾವುಟವನ್ನು ಆರಾಧಿಸುತ್ತಾರೆ. ಹೀಗಾಗಿ ಒಕ್ಕೂಟ ಸರ್ಕಾರ ಕೂಡಲೇ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?
“ಶನಿವಾರ ಸಂಜೆ ಸಾವಿರಾರು ಕರವೇ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡಿಸುವ ಈ ಹೋರಾಟಕ್ಕೆ ಎಲ್ಲ ಕನ್ನಡಿಗರೂ ಬೆಂಬಲ ನೀಡಬೇಕು” ಎಂದು ಟಿ ಎ ನಾರಾಯಣಗೌಡ ಕೋರಿದ್ದಾರೆ.