ಸರ್ಕಾರಿ ಶಾಲೆ ದಲಿತ ಪ್ರಾಂಶುಪಾಲರೊಬ್ಬರು ಜಾತಿ ನಿಂದನೆ ಮತ್ತು ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಜುನಾ ಜಂಜಾರಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ಕಾಂತಿ ಚೌಹಾಣ್ ಎಂಬುವರು ಶಾಲೆಯಲ್ಲೇ ವಿಷ ಸೇವಿಸಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜುನಾಗಢ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪ್ರಾಂಶುಪಾಲರು ತಮ್ಮ ನೋವಿನ ಬಗ್ಗೆ ವಿಡಿಯೋ ಮಾಡಿದ್ದು, ”ಶಾಲೆಯ ಸರ್ಪಂಚ್ ಅವರು ಶಾಲೆಗೆ ಬಂದಿರುವ ಅನುದಾನವನ್ನು ತಮಗೆ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ಅವರು [ಸರ್ಪಂಚ್] ಗ್ರಾಮಸ್ಥರಿರುವ ಸಾಮಾಜಿಕ ಮಾಧ್ಯಮದ (ವಾಟ್ಸಾಪ್) ಗುಂಪುಗಳಲ್ಲಿ ನನ್ನ ಮತ್ತು ನನ್ನ ಜಾತಿಯ ಬಗ್ಗೆ ಅವಹೇಳನ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಾನು ತಳ ಸಮುದಾಯಕ್ಕೆ ಸೇರಿದ್ದೇನೆ. ನಾನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ನೀವು [ಸರ್ಪಂಚ್] ನಮ್ಮ ಜಾತಿಯನ್ನು ಅಸ್ತ್ರವಾಗಿ ಬಳಸಿಕೊಂಡು ನಮ್ಮ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದೀರಿ. ಇದು ಸರ್ಪಂಚ್ ಹುದ್ದೆಗೆ ಅವಮಾನಕರವಾಗಿದೆ” ಎಂದು ಪ್ರಾಂಶುಪಾಲರು ವಿಡಿಯೋದಲ್ಲಿ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಪ್ರಾಂಶುಪಾಲರ ಮೃತದೇಹವನ್ನು ತೆಗೆದುಕೊಳ್ಳಲು ನಿರಾಕರಿಸಿರುವ ಅವರ ಕುಟುಂಬವು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದೆ.
ಪೊಲೀಸರು ಶಾಲೆಯ ಸರಪಂಚ್ ಮತ್ತು ಮೂವರು ಶಿಕ್ಷಕರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸರಪಂಚ್ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.
“ಐಪಿಸಿ ಸೆಕ್ಷನ್ 306 [ಆತ್ಮಹತ್ಯೆಗೆ ಪ್ರಚೋದನೆ] ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಅಮ್ರೇಲಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಪಿ ಭಂಡಾರಿ ತಿಳಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.