ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ
ಸಾಮಾಜಿಕ ಕಾರ್ಯಕರ್ತ ಮತ್ತು ಈಕ್ವಿಟಿ ಸ್ಟಡೀಸ್ ಚಿಂತನ ಕೇಂದ್ರದ ನಿರ್ದೇಶಕ ಹರ್ಷ ಮಂದರ್ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡಸಿದೆ. ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆ ಮತ್ತು ಅದರ ನಿರ್ದೇಶಕರಾದ ಹರ್ಷ ಮಂದರ್ ಮೇಲೆ ವಿದೇಶಿ ಅನುದಾನ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ) ನಿಯಮಗಳ ಉಲ್ಲಂಘನೆ ಆರೋಪ ಹೊರಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಪ್ರಾಥಮಿಕ ತನಿಖೆಯ ಅಂಗವಾಗಿ ಸಿಬಿಐ ಕಚೇರಿಯ ಸಿಬ್ಬಂದಿ ಸೇರಿದಂತೆ ಹಲವರನ್ನು ಪ್ರಶ್ನಿಸಿದೆ. ದೆಹಲಿಯ ಅದ್ಚಿನಿ ಪ್ರದೇಶದಲ್ಲಿರುವ ಅಧ್ಯಯನ ಕೇಂದ್ರ ಮತ್ತು ವಸಂತ್ ಕುಂಜ್ ಪ್ರದೇಶದಲ್ಲಿರುವ ಹರ್ಷ ಮಂದರ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ಕಳೆದ ಜೂನ್ನಲ್ಲಿ ಕೇಂದ್ರ ಗೃಹ ಸಚಿವಾಲಯ ಚಿಂತನ ಕೇಂದ್ರದ ವಿದೇಶಿ ಅನುದಾನ (ನಿಯಂತ್ರಣ) ಕಾಯ್ದೆಯ ಪರವಾನಗಿಯನ್ನು 180 ದಿನಗಳವರೆಗೆ ರದ್ದುಪಡಿಸಿತ್ತು. ಮಂದರ್ ನಿಯಮಿತವಾಗಿ ಅನೇಕ ದಿನಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು ಎಂದು ಆಗ ಸಚಿವಾಲಯ ತಿಳಿಸಿತ್ತು.
2011-12ರಿಂದ 2017-18ರ ನಡುವೆ ವೃತ್ತಿಪರ ರಶೀದಿ/ ಪಾವತಿಯಲ್ಲಿ ಮಂದರ್ ರೂ 12,64,671 ವಿದೇಶಿ ಅನುದಾನವನ್ನು ಸಂಸ್ಥೆಯ ವಿದೇಶಿ ಅನುದಾನ (ನಿಯಂತ್ರಣ) ಕಾಯ್ದೆ ಖಾತೆಗೆ ಸ್ವೀಕರಿಸಿದ್ದಾರೆ. ಇದು (ಎಫ್ಸಿಆರ್ಎ) ವಿದೇಶಿ ಅನುದಾನ (ನಿಯಂತ್ರಣ) ಕಾಯ್ದೆ ನಿಯಮದ ಉಲ್ಲಂಘನೆ ಎಂದು ಗೃಹ ಸಚಿವಾಲಯ ಆರೋಪಿಸಿದೆ.
ಹರ್ಷ ಮಂದರ್ ನಿವೃತ್ತ ಐಎಎಸ್ ಅಧಿಕಾರಿ ಎನ್ನುವುದನ್ನೂ ನೆನಪಿಟ್ಟುಕೊಳ್ಳಬೇಕಿದೆ. ಕಳೆದ ವರ್ಷ ಮಂದರ್ ಸ್ಥಾಪಿಸಿದ್ದ ಸರ್ಕಾರೇತರ ಸಂಘಟನೆ ಅಮನ್ ಬಿರಾದರಿ ಟ್ರಸ್ಟ್ಗೆ ವಿದೇಶಿ ಅನುದಾನದ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿತ್ತು.