ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಗುರುವಾರ ನಡೆಯಬೇಕಿದ್ದ ಬಹುನಿರೀಕ್ಷಿತ ಚುನಾವಣೆಯನ್ನು ನಾಮನಿರ್ದೇಶಿತ ಅಧ್ಯಕ್ಷರ ‘ಅನಾರೋಗ್ಯ’ ಕಾರಣ ನೀಡಿ ಮುಂದೂಡಲಾಗಿದೆ. ಚುನಾವಣೆ ಮುಂದೂಡಿಕೆಯನ್ನು ಬಿಜೆಪಿಯ ಕುತಂತ್ರವೆಂದು ಕಾಂಗ್ರೆಸ್ ಮತ್ತು ಎಎಪಿ ಆರೋಪಿಸಿವೆ.
ಪಾಲಿಕೆಯಲ್ಲಿ 13 ಸ್ಥಾನಗಳನ್ನು ಹೊಂದಿರುವ ಎಎಪಿ ಮತ್ತು 7 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಮೇಯರ್ ಸ್ಥಾನಕ್ಕೆ ಹೋರಾಟ ನಡೆಸುತ್ತಿವೆ. ಈ ನಡುವೆ, ಚುನಾವಣೆ ಮುಂದೂಡಲಾಗಿದ್ದು, ಇದರ ವಿರುದ್ಧ ಪಾಲಿಕೆ ಕಟ್ಟಡದ ಬಳಿ ಎಎಪಿ-ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಬಂದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಪವನ್ ಕುಮಾರ್ ಬನ್ಸಾಲ್, ”ಬಿಜೆಪಿಗೆ ತಾವು ಸೋಲುತ್ತೇವೆ ಎಂದು ತಿಳಿದಿತ್ತು. ಅದಕ್ಕಾಗಿಯೇ ಅವರು ಈ ತಂತ್ರ ಹೆಣೆದಿದ್ದಾರೆ. ಅವರು ನ್ಯಾಯಯುತವಾಗಿದ್ದರೆ, ಅಧ್ಯಕ್ಷರು ಅನಾರೋಗ್ಯಕ್ಕೆ ಒಳಗಾಗಿದ್ದರೆ, ಅವರ ಸ್ಥಾನಕ್ಕೆ ಬೇರೊಬ್ಬರನ್ನು ತಕ್ಷಣವೇ ನೇಮಿಸಿ ಚುನಾವಣೆ ನಡೆಸುತ್ತಿದ್ದರು” ಎಂದು ಕಿರಿಕಾರಿದ್ದಾರೆ.
“ಇದು ಬಿಜೆಪಿಯ ಗಿಮಿಕ್. ನಾವು ಹೈಕೋರ್ಟ್ಗೆ ಹೋಗುತ್ತೇವೆ. ನ್ಯಾಯಾಲಯದಿಂದ ನ್ಯಾಯ ಪಡೆಯುತ್ತೇವೆ. ಈ ಸಣ್ಣ ಚುನಾವಣೆಯಲ್ಲಿ ಬಿಜೆಪಿಯು ನಮ್ಮ ಮೈತ್ರಿಯ ಬಗ್ಗೆ ಭಯಪಡುತ್ತಿದೆ ಎಂದರೆ, ರಾಷ್ಟ್ರೀಯ ಮಟ್ಟದ ಮೈತ್ರಿಯ ಬಗ್ಗೆ ಯಾವ ಹಂತಕ್ಕೆ ಭಯಪಟ್ಟಿರಬಹುದು” ಎಂದು ಎಎಪಿ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹೇಳಿದ್ದಾರೆ.
35 ಸ್ಥಾನಗಳನ್ನು ಹೊಂದಿರುವ ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 14 ಸದಸ್ಯರನ್ನು ಹೊಂದಿದೆ. ಎಎಪಿ 13 ಹಾಗೂ ಕಾಂಗ್ರೆಸ್ 7 ಸದಸ್ಯರನ್ನು ಹೊಂದಿವೆ. ಅಲ್ಲದೆ, ಎಸ್ಎಡಿಯ ಒಬ್ಬರು ಸದಸ್ಯರಿದ್ದಾರೆ.