ಒಡವೆ ವಿಚಾರಕ್ಕೆ ಗಂಡ ಹೆಂಡತಿ ನಡುವೆ ನಡೆಯುತ್ತಿದ್ದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಗೌರಿಬಿದನೂರಿನ ಗಂಗಾನಗರದಲ್ಲಿ ವಾಸವಾಗಿದ್ದ ಲಕ್ಷ್ಮಿದೇವಿ ಮೃತ ದುರ್ದೈವಿ. ಅವರ ಮನೆ ಹೊರಗೆ ಕೆಟ್ಟ ವಾಸನೆ ಬಂದಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಮನೆಯ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ಬಳಿಕ ರೂಮಿನ ಮಂಚದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಕ್ಷ್ಮಿದೇವಿ ಅವರ ಶವ ಪತ್ತೆಯಾಗಿದೆ. ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಲಕ್ಷ್ಮಿದೇವಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಕೂಡಲೇ ಲಕ್ಷ್ಮಿದೇವಿ ಅವರ ಮಕ್ಕಳಿಗೆ ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗೌರಿಬಿದನೂರು ನಗರಠಾಣೆ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್ ನಾಗೇಶ್ ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಲಕ್ಷ್ಮಿದೇವಿ ಅವರ ಪತಿ ಕೃಷ್ಣಪ್ಪ(53) ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದರು. ಆದರೆ ಕೃಷ್ಣಪ್ಪ ತುಂಬಾ ಜಿಪುಣ. ಪತ್ನಿ ಮತ್ತು ಮಕ್ಕಳ ಖರ್ಚಿಗೆ ಹಣ ನೀಡುತ್ತಿರಲಿಲ್ಲ. ಅವರ ಚಿನ್ನಾಭರಣಗಳನ್ನು ಬಳಸಲೂ ಬಿಡುತ್ತಿರಲಿಲ್ಲ. ಅವನ್ನೆಲ್ಲ ಬೀರುವಿನಲ್ಲಿ ಬಂಧಿಸಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ; ಆರು ಯುವತಿಯರ ರಕ್ಷಣೆ
“ಮೇ 19 ರಂದು ಲಕ್ಷ್ಮಿದೇವಿ ಅವರ ಮಕ್ಕಳು ಮನೆಗೆ ಬಂದಿದ್ದರು. ಈ ವೇಳೆ ಒಡವೆ ವಿಚಾರಕ್ಕೆ ಕೃಷ್ಣಪ್ಪ ಮಚ್ಚಿನಿಂದ ಹೆಂಡತಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದ. ಇದನ್ನು ತಡೆದ ಮಕ್ಕಳು ಅಪ್ಪನಿಗೆ ಬುದ್ಧಿ ಹೇಳಿ ಹೋಗಿದ್ದರು. ಆದರೆ ಇದೀಗ ಲಕ್ಷ್ಮಿದೇವಿ ಶವವಾಗಿದ್ದಾರೆ. ಇತ್ತ ಕೃಷ್ಣಪ್ಪ ತನ್ನ ಮೊಬೈಲ್ ಫೋನನ್ನು ಮಂಚದ ಮೇಲೆಯೇ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಜಿಪುಣ ಗಂಡನೇ ಹೆಂಡತಿಯನ್ನು ಕೊಂದಿದ್ದಾನೆ” ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಗಳು ಲೀಲಾ ಕೃಷ್ಣಪ್ಪನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.