ತನ್ನ ಮಕ್ಕಳನ್ನು ಪಾಲನೆ ಮಾಡುವುದಕ್ಕಾಗಿ ಪತ್ನಿಗೆ ಉಪನ್ಯಾಸಕಿ ಹುದ್ದೆ ತೊರೆಯುವಂತೆ ಮಾಡಿದ್ದ ಪತಿ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪತ್ನಿಗೆ ಪ್ರತಿ ತಿಂಗಳು 36,000 ರೂ. ನೀಡುವಂತೆ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿದೆ.
ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದ ಪತಿ, ತನ್ನ ಮಕ್ಕಳನ್ನು ಪೋಷಿಸುವ ಸಲುವಾಗಿ ಉಪನ್ಯಾಸಕಿಯಾಗಿದ್ದ ಪತ್ನಿಯ ಕೆಲಸ ಬಿಡಿಸಿದ್ದರು. ಅಲ್ಲದೆ, ಆಕೆಗೆ ಜೀವನಾಂಶವನ್ನೂ ನೀಡದೆ ವಂಚಿಸಿದ್ದರು. ತನ್ನ ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ, ಹೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಅರ್ಜಿ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಆಕೆಯ ಜೀವನ ವೆಚ್ಚ ಮತ್ತು ಮಕ್ಕಳ ಪಾಲನೆಯ ವೆಚ್ಚಕ್ಕಾಗಿ ಮಾಸಿಕ 18,000 ರೂ. ನೀಡುವಂತೆ ಆದೇಶಿಸಿತ್ತು. ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪತಿಯ ವಾದವನ್ನು ತಿರಸ್ಕರಿಸಿದೆ. ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸಿ, ಆಕೆಗೆ ಮಾಸಿಕ 36,000 ರೂ. ನೀಡುವಂತೆ ಆದೇಶಿಸಿದೆ.
ಹೆಂಡತಿಯು ‘ಸೋಮಾರಿಯಾಗಿದ್ದಾಳೆ’ ಎಂಬ ಪತಿಯ ವಾದವನ್ನು ಉಲ್ಲೇಖಿಸಿದ ನ್ಯಾಯಾಲಯ, “ಪತ್ನಿಯು ದುಡಿಯುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ, ಆಕೆ ಉದ್ಯೋಗ ತೊರೆಯುವಂತೆ ಮಾಡಲಾಗಿದೆ. ಆಕೆಯ ದುಡಿಮೆಯನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ಆಕೆ ಜೀವನಾಂಶಕ್ಕೆ ಅರ್ಹಳಾಗಿದ್ದಾರೆ. ಈ ಪ್ರಕರಣ ಮಾತ್ರವಲ್ಲದೆ, ಪ್ರತಿ ಪ್ರಕರಣವನ್ನು ಅರ್ಹತೆಯ ಮೇಲೆ ಪರಿಗಣಿಸಬೇಕು. ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಅವಿಶ್ರಾಂತವಾಗಿ ಮಹಿಳೆ ಕೆಲಸ ಮಾಡುತ್ತಾಳೆ. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣ ಸಮಯದ ಕೆಲಸವಾಗಿದೆ” ಎಂದು ನ್ಯಾಯಾಲಯ ಹೇಳಿದೆ.