ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಈ ನಡುವೆ ಒಂದಿಂಚು ಭೂಮಿಯನ್ನೂ ಕೊಡೆವು ಎಂದು ಅಮಿತ್ ಶಾ ಘೋಷಿಸಿರುವುದು ಗಡಿಯಲ್ಲಿ ಮತ್ತೆ ಸಂಘರ್ಷದ ವಾತಾವರಣದ ಸೂಚನೆ ನೀಡಿದೆ
ಅರುಣಾಚಲ ಪ್ರದೇಶದ ಪ್ರಮುಖ ನಗರಗಳ ಹೆಸರುಗಳನ್ನು ಚೀನಾ ಮರುನಾಮಕರಣ ಮಾಡಿದ ನಂತರ ಕೇಂದ್ರ ಗೃಹಸಚಿವ ಅಮಿತ್ ಶಾ ಆ ರಾಜ್ಯಕ್ಕೆ ಭೇಟಿ ನೀಡಿ ಒಂದಂಚು ನೆಲವನ್ನೂ ಬಿಟ್ಟುಕೊಡುವುದಿಲ್ಲ ಎಂದು ಘೋಷಿಸಿದ್ದಾರೆ.
ಇತ್ತೀಚೆಗೆ ಅದಾನಿ ವಿಚಾರವಾಗಿಯೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಚೀನಾ ಮತ್ತು ಪ್ರಧಾನಿ ಮೋದಿಯ ಆಪ್ತ ಮಿತ್ರ ಉದ್ಯಮಿ ಗೌತಮ್ ಅದಾನಿ ನಡುವೆ ಸಂಬಂಧ ಪ್ರಶ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದು ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ.
ಅರುಣಾಚಲ ಪ್ರದೇಶದ ಗಡಿಭಾಗದ ಗ್ರಾಮ ಕಿಬಿಥೂಗೆ ಅಮಿತ್ ಶಾ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. “ಚೀನಾದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ” ಎಂದು ಚೀನಾ ಅಭಿಪ್ರಾಯಪಟ್ಟಿದೆ.
ಅರುಣಾಚಲ ಪ್ರದೇಶದ ಕೆಲವು ನಗರಗಳ ಹೆಸರನ್ನು ಚೀನಾ ಬದಲಿಸಿದ ವಾರದೊಳಗೆ ಅಮಿತ್ ಶಾ ಈಗ ರಾಜ್ಯದ ಭೇಟಿಯಲ್ಲಿದ್ದಾರೆ.
ಏಪ್ರಿಲ್ 9ರಂದು ಈಶಾನ್ಯ ರಾಜ್ಯದಲ್ಲಿ ಸಭೆ ನಡೆಸಿದ ಅಮಿತ್ ಶಾ, “ನಮ್ಮ ಭೂಮಿಯ ಒಂದಿಂಚನ್ನೂ ಯಾರಿಗೂ ತೆಗೆದುಕೊಳ್ಳಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಕಿಬಿಥೂ ನಿವಾಸಿಗಳು ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಸಂಪನ್ಮೂಲಗಳ ಹೊರತಾಗಿಯೂ ಭಾರತದ ಪರವಾಗಿ ಅತೀವ ಉತ್ಸಾಹವನ್ನು ತೋರಿಸಿರುವುದನ್ನು ನೆನಪಿಸಿಕೊಂಡ ಶಾ, 1962ರ ಯುದ್ಧದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಗೃಹಸಚಿವರ ಅರುಣಾಚಲ ಪ್ರದೇಶ ಭೇಟಿಯನ್ನು ದೃಢವಾಗಿ ಚೀನಾ ವಿರೋಧಿಸಿದೆ. “ಅರುಣಾಚಲದಲ್ಲಿ ಅಮಿತ್ ಶಾ ಚಟುವಟಿಕೆಗಳು ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಅಡ್ಡಿಯಾಗಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರತಿಪಕ್ಷಗಳ ದಮನದಿಂದ ಭಾರತದ ಸಮಸ್ಯೆಗಳು ಪರಿಹಾರವಾಗದು: ಸೋನಿಯಾ ಗಾಂಧಿ
“ಝಾಂಗ್ನಾನ್ ಚೀನಾದ ಪ್ರದೇಶ. ಝಾಂಗ್ನಾನ್ಗೆ ಭಾರತೀಯ ಅಧಿಕಾರಿಯ ಭೇಟಿ ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ. ಗಡಿ ಭಾಗದಲ್ಲಿ ಶಾಂತಿ ಮತ್ತು ಸಮಾಧಾನ ಕಾಪಾಡುವಲ್ಲಿ ಇದು ಅಡಚಣೆಯುಂಟು ಮಾಡಲಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಚೀನಾದ ಕಿಬಿಥೂನಲ್ಲಿ ‘ವೈಬ್ರಂಟ್ ವಿಲೇಜಸ್’ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, “ಭಾರತದ ಗಡಿಭಾಗಕ್ಕೆ ದೇಶ ಮೊದಲ ಆದ್ಯತೆ ಕೊಡಲಿದೆ. ಯಾರೇ ಬೇಕಾದರೂ ಭಾರತದ ಭೂಮಿಗೆ ಕಾಲಿಡುವ ಪ್ರಯತ್ನ ನಡೆಸುವ ಕಾಲ ಮರೆಯಾಗಿದೆ. ಒಂದು ಸೂಜಿಯಷ್ಟು ಭಾಗವನ್ನೂ ಭಾರತ ಬಿಟ್ಟುಕೊಡದು” ಎಂದು ಅವರು ಹೇಳಿದ್ದಾರೆ.