ಕಲಿಕೆಯಲ್ಲಿ ಓದಿನ ಜೊತೆಗೆ ಕ್ರೀಡೆಯೂ ಕೂಡ ಒಂದು ಭಾಗ. ಎಲ್ಲ ಮಕ್ಕಳು ಕ್ರೀಡಾಸಕ್ತಿ ಬೆಳೆಸಿಕೊಂಡು ಕ್ರೀಡೆಗಳಲ್ಲೂ ಸಾಧನೆ ಮಾಡಬೇಕು ಎಂದು ಚಿತ್ರದುರ್ಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಹೇಳಿದ್ದಾರೆ.
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.”ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯ ಅಲ್ಲ. ಪಾಲ್ಗೊಳ್ಳುವಿಕೆ ಮುಖ್ಯ. ಸದಾ ಪಾಲ್ಗೊಳುವಿಕೆಯಿಂದ ಒಮ್ಮೆ ಸೋತಂತಹ ವ್ಯಕ್ತಿ ಯಾವುದೇ ಹಂತದಲ್ಲೂ ಸಹ ಗೆಲುವಿಗಾಗಿ ಸೆಣಸುತ್ತಾರೆ. ಇದರಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ” ಎಂದರು.
“ದೈಹಿಕವಾಗಿ ಸದೃಢರಾಗಿದ್ದ ವ್ಯಕ್ತಿ ಮಾನಸಿಕವಾಗಿಯೂ ಸದೃಢರಾಗಿರಲು ಸಾಧ್ಯ. ಆದರೆ, ಇಂದು ಹೆಚ್ಚಿನ ಮಕ್ಕಳು ಮೊಬೈಲ್ಗಳ ಮೊರೆ ಹೋಗಿದ್ದಾರೆ. ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ಡಿಡಿಪಿಐ ಹಾಗು ಶಾಲಾ ಮುಖ್ಯಸ್ಥರು ಎಲ್ಲಾ ಶಾಲೆಗಳಲ್ಲೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಸೂಚನೆ ನೀಡಿದರು.
“ಚಿತ್ರದುರ್ಗ ಜಿಲ್ಲೆ 10ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲನೆ ಸ್ಥಾನದಲ್ಲಿದೆ. ಅದೇ ರೀತಿ ಕ್ರೀಡೆಯಲ್ಲೂ ಕೂಡ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿ ಇರಬೇಕು. ಇದಕ್ಕೆ ಅನುಗುಣವಾಗಿ ದೈಹಿಕ ಶಿಕ್ಷಕರು ಕ್ರೀಡಾಪಟುಗಳನ್ನು ಸನ್ನದ್ಧರಾನ್ನಾಗಿ ಮಾಡಬೇಕು” ಎಂದು ಸೂಚಿಸಿದರು.
ಡಿಡಿಪಿಐ ರವಿಶಂಕರ್ ರೆಡ್ಡಿ ಮಾತನಾಡಿ, ಜಿಲ್ಲೆಯ ಮಕ್ಕಳು ಓದಿನ ಜೊತೆಗೆ ಕ್ರೀಡೆಗಳಲ್ಲೂ ಸಹ ಅತ್ಯುನ್ನತವಾದ ಪ್ರತಿಭೆಯನ್ನು ಹೊಂದಿದ್ದಾರೆ. ಈ ಪ್ರತಿಭೆ ಇದೇ ರೀತಿ ಮುಂದುವರೆಯಬೇಕಾದರೆ ಪೋಷಕರು, ಶಿಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ. ಆದ್ದರಿಂದ ಮಕ್ಕಳನ್ನು ಯಾವುದೇ ಹಂತದಲ್ಲೂ ಎದೆಗುಂದುವಂತೆ ಮಾಡಬಾರದು. ಬದಲಾಗಿ ಅವರಿಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.