ಯುವ ನಿರ್ದೇಶಕ ಸಂತೋಷ್ ಕೊಡೆಂಕೇರಿ ನಿರ್ದೇಶನ ಮತ್ತು ದೃಷ್ಟಿ ಮೀಡಿಯಾ ಅಂಡ್ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರ ʼರವಿಕೆ ಪ್ರಸಂಗʼ ಇದೇ 16ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು ಟ್ರೈಲರ್ ಬಿಡುಗಡೆಯಾಗಿ ಸದಭಿರುಚಿಯ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ನಡೆಸುತ್ತಿರುವ ಚಿತ್ರ ತಂಡ “ಕರ್ನಾಟಕದ ಬೆಸ್ಟ್ ಟೈಲರ್” ಸ್ಪರ್ಧೆಯನ್ನು ಏರ್ಪಡಿಸಿದೆ.
“ಕರ್ನಾಟಕದ ಬೆಸ್ಟ್ ಟೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಿದ ತಂಡ ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಘೋಷಿಸಿದೆ. ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನಿಮಾ ಟಿಕೆಟ್ ನೀಡಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಹಾಗೆಯೇ ಬೆಸ್ಟ್ ಡಿಸೈನ್ ಎಂಬ ಸ್ಪರ್ಧೆಯೊಂದನ್ನು ಕೂಡಾ ಘೋಷಿಸಿದೆ. “ತಮಗೆ ಇಷ್ಟವಾದ ತಮ್ಮಲ್ಲಿರುವ ಬೆಸ್ಟ್ ಡಿಸೈನರ್ ರವಿಕೆಯ ಚಿತ್ರವನ್ನು ಕಳುಹಿಸಿಕೊಡಲು ಕೋರಲಾಗಿದೆ. ಈಗಾಗಲೇ ಹಲವು ಮಹಿಳೆಯರು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದಾರೆ. ಎರಡೂ ಸ್ಪರ್ಧೆಗಳ ಪ್ರವೇಶಕ್ಕೆ ಫೆ 14 ಕೊನೆಯ ದಿನವಾಗಿದೆ” ಎಂದು ನಿರ್ದೇಶಕ ಸಂತೋಷ್ ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲ ರಾಜ್ಯದಾದ್ಯಂತ ಹಲವು ಊರುಗಳಲ್ಲಿ ಜನರೊಂದಿಗೆ ಚಿತ್ರದ ಟ್ರೈಲರ್ ಪ್ರದರ್ಶಿಸಿ ಜನರೊಂದಿಗೆ ಸಂವಾದ ನಡೆಸುತ್ತಿರುವ ಚಿತ್ರತಂಡದ ಜೊತೆ ಮಹಿಳೆಯರು ರವಿಕೆ ಸಂಬಂಧಿಸಿದ ತಮ್ಮ ನವಿರು ಅನುಭವಗಳನ್ನು ಹಂಚಿಕೊಂಡು ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ.
ಗಣ್ಯರ ಮೆಚ್ಚು,ಹಾರೈಕೆ : ಜನವರಿ 20ರಂದು ಚಿತ್ರದ ಟ್ರೈಲರನ್ನು ನಟ ಧನಂಜಯ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಗಾಯಕಿಯೂ ಆಗಿರುವ ಕಿರುತೆರೆ ನಟಿ ಗೀತಾ ಭಾರತಿ ಭಟ್ ನಟಿಸಿರುವ ಈ ಚಿತ್ರಕ್ಕೆ ಚಿತ್ರರಂಗದ ಹಲವು ಗಣ್ಯರು ವಿಡಿಯೋ ಮೂಲಕ ಶುಭ ಹಾರೈಸಿದ್ದಾರೆ. ಟ್ರೈಲರ್ ನೋಡಿದ ಹಿರಿಯ ಕಲಾವಿದರು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಹಿರಿಯ ಪತ್ರಕರ್ತೆ ವಿಜಯಮ್ಮ, ಹಿರಿಯ ಕಲಾವಿದರಾದ ಡಾಲಿ ಧನಂಜಯ್, ಸಿಹಿಕಹಿ ಚಂದ್ರು, ಪದ್ಮಜಾ ರಾವ್, ನಿರ್ದೇಶಕ ಯೋಗರಾಜ್ ಭಟ್, ಮಹೇಶ್ ಬಾಬು, ನಟಿ ಲಕ್ಷ್ಮಿ ಭಟ್, ದಯಾಳ್ ಪದ್ಮನಾಭನ್, ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಶಮಿತಾ ಮಲ್ನಾಡ್, ಗುರುಕಿರಣ್, ಹಿರಿಯ ನಟಿ ಶ್ರುತಿ ಹಾಗೂ ಬೇರೆ ಬೇರೆ ಕ್ಷೇತ್ರದ ಗಣ್ಯರು ಟ್ರೈಲರ್ ವೀಕ್ಷಿಸಿ ವಿಡಿಯೋ ಮೂಲಕ ಶುಭ ಕೋರಿದ್ದಾರೆ.
ಚಿತ್ರಕ್ಕೆ ಮುರಳೀಧರ್ ಎನ್ ಅವರ ಛಾಯಾಗ್ರಹಣವಿದೆ. ರಘು ಶಿವರಾಮ್ ಸಂಕಲನ, ಕಿರಣ್ ಕಾವೇರಪ್ಪ ಸಾಹಿತ್ಯವಿದೆ. ವಿನಯ್ ಶರ್ಮಾ ಸಂಗೀತ ನೀಡಿದ್ಧಾರೆ. ರಮೇಶ್ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ, ಹನುಮಂತೇಗೌಡ, ಖುಷಿ ಆಚಾರ್, ಹನುಮಂತ್ ರಾವ್ ಕೆ ಪಾತ್ರ ವರ್ಗದಲ್ಲಿದ್ದಾರೆ. ಕಂದಯ್ಯ ಶೆಟ್ಟಿ ಅವರು ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕತೆ ಮತ್ತು ಸಂಭಾಷಣೆ ಪಾವನಾ ಸಂತೋಷ್ ಬರೆದಿದ್ದಾರೆ. ರವಿಕೆ ಹೊಲಿಸುವಲ್ಲಿ ಅನುಭವಿಸಿದ ತಮ್ಮದೇ ಅನುಭವದ ಎಳೆ ಇಟ್ಟುಕೊಂಡು ಕಥೆಯನ್ನು ಹೆಣೆದಿರುವುದಾಗಿ ಪಾವನಾ ಹೇಳಿದ್ದಾರೆ.
ಮಧ್ಯಮ ಕುಟುಂಬವೊಂದರ ಕತೆ ಇದಾಗಿದೆ. ಮದುವೆಗೆ ತಯಾರಾಗುವ ಯುವತಿಯು ರವಿಕೆ ಹೊಲಿಯಲು ಟೈಲರ್ಗೆ ಕೊಟ್ಟಿರುತ್ತಾಳೆ. ಆತ ಆಕೆ ಹೇಳಿದಂತೆ ಹೊಲಿಯದ ಕಾರಣ ಶುರುವಾದ ಜಗಳ ಕೋರ್ಟ್ ಮೆಟ್ಟಿಲೇರುತ್ತದೆ. ಈ ಎಳೆಯ ಮಧ್ಯೆ ಹೆಣ್ಣಿನ ಭಾವನೆಗಳು, ತುಮುಲಗಳು, ಸಮಾಜ ನೋಡುವ ಬಗೆಯನ್ನು ನವಿರು ಹಾಸ್ಯದ ಮೂಲಕ ಚಿತ್ರಿಸಲಾಗಿದೆ. ಮಹಿಳೆಯರ ಬದುಕಿಗೆ ಆಪ್ತವಾಗುವ ಸಿನಿಮಾ ಇದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆ, ತೊಡಿಕಾನ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ದಕ್ಷಿಣ ಕನ್ನಡದ ಭಾಷಾ ಸೊಗಡು ಚಿತ್ರದಲ್ಲಿದೆ. ರಾಜ್ಯಾದ್ಯಂತ ಹಾಗೂ ಬೆಂಗಳೂರಿನ ಮಲ್ಟಿಫ್ಲೆಕ್ಸ್ಗಳಲ್ಲಿ ಇದೇ 16 ರಂದು ಚಿತ್ರ ಬಿಡುಗಡೆಯಾಗಲಿದೆ.