ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಕೆಲ ನಾಯಕರಲ್ಲಿ ಅಸಮಾಧಾನವಿತ್ತು. ಇದೀಗ ಮೈತ್ರಿ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ತುಮಕೂರು ಜಿಲ್ಲೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾದ ಘಟನೆ ನಡೆದಿದೆ.
ಜಿಲ್ಲೆಯ ತುರುವೇಕೆರೆಯಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾಗಿದ್ದು, ಇದೇ ವೇಳೆ ತಳ್ಳಾಟ-ನೂಕಾಟ ಕೂಡ ನಡೆದಿದೆ.
ಕಳೆದ ಬಾರಿ ನಾನು ಸೋಲಲು ವಿಶ್ವನಾಥ್ ಕಾರಣ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಕಳೆದ ಬಾರಿ ಮುದ್ದಹನುಮೇಗೌಡ ಪರ ಕೆಲಸ ಮಾಡಿದರು ಎಂದು ಭಾಷಣದ ವೇಳೆ ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ ಮಾಡಿದ್ದಾರೆ. ಈ ವೇಳೆ ಎಂ ಟಿ ಕೃಷ್ಣಪ್ಪ ಆರೋಪಕ್ಕೆ ವಿಶ್ವನಾಥ್ ಸಮಜಾಯಿಷಿ ನೀಡಲು ಮುಂದಾದರು.
ಸೋಮಣ್ಣ ನೇತೃತ್ವದಲ್ಲಿ ಮೈತ್ರಿ ಸಭೆ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಮೈತ್ರಿ ಸಭೆಯಲ್ಲಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದೆ. ತುಮಕೂರಿನ ತುರುವೇಕೆರೆಯಲ್ಲಿ ನಡೆದ ಸಭೆಯಲ್ಲಿ ಮಾತಿನ ಚಕಮಕಿ ಉಂಟಾಗಿದೆ.@INCKarnataka @BJP4Karnataka @JanataDal_S pic.twitter.com/MV7spQmdHb
— eedina.com (@eedinanews) March 25, 2024
ಇದು ಇನ್ನಷ್ಟು ಸಮಸ್ಯೆ ಉಂಟು ಮಾಡುವುದನ್ನು ಅರಿತ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿ.ಸೋಮಣ್ಣ ಬೇಡವೆಂದರು. ವೇದಿಕೆ ಮುಂಭಾಗದಲ್ಲಿದ್ದ ಜೆಡಿಎಸ್ನ ಕಾರ್ಯಕರ್ತ ಸತೀಶ್ ಎಂಬುವವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಕಾರ್ಯಕರ್ತರ ನಡುವೆ ವಾಗ್ವಾದ ಹಿನ್ನೆಲೆ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಎಂ.ಟಿ.ಕೃಷ್ಣಪ್ಪ, ಮಸಾಲೆ ಜಯರಾಂ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಶ್ರಮಿಸಿದರು.
“ಮೈತ್ರಿ ಅಂದ್ಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಆದರೆ ಅದನ್ನೇ ಮನದಲ್ಲಿ ಇಟ್ಟುಕೊಂಡು ಚುನಾವಣೆಗೆ ಇಳಿದರೆ ಕಷ್ಟ” ಎಂದು ಹೇಳುತ್ತಾ ವಿ ಸೋಮಣ್ಣ, ‘ಭಾರತ್ ಮಾತಾಕೀ’ ಎಂದು ಘೋಷಣೆ ಕೂಗಿ, ಎಲ್ಲರನ್ನೂ ಸಮಾಧಾನಿಸಲು ಯತ್ನಿಸಿದರು. ಮಾಧ್ಯಮದವರ ಎದುರಲ್ಲೇ ಈ ಎಲ್ಲ ಬೆಳವಣಿಗೆಗಳು ನಡೆದಿದ್ದು, ಮಾತಿನ ಚಕಮಕಿಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.