“ಹವಾಮಾನ ವೈಪರೀತ್ಯ ತಡೆಗೆ ವಿಶ್ವಾಸಾರ್ಹ ತಂತ್ರಗಳನ್ನು ಹೊಂದಬೇಕಾಗಿದೆ” ಎಂದು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಅರ್ಥಶಾಸ್ತ್ರಜ್ಞ ಮಾಂಟೆಕ್ ಸಿಂಗ್ ಅಹ್ಲೂವಾಲಿಯಾ ಹೇಳಿದರು.
ದೇಶವು ಅಳವಡಿಸಿಕೊಂಡಿರುವ ಉದಾರೀಕರಣ ನೀತಿಯ ರೂವಾರಿಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್, ತಮ್ಮ ’ಬ್ಯಾಕ್ಸ್ಟೇಜ್’ ಕೃತಿಯ ಕನ್ನಡಾನುವಾದ ’ಎಂ ಡಾಕ್ಯುಮೆಂಟ್’ ಪುಸ್ತಕವನ್ನು ಉಡುಪಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
’ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಗೆ ಹೊಸ ಸವಾಲುಗಳು’ ವಿಷಯ ಕುರಿತು ವಿಶೇಷ ಉಪನ್ಯಾಸ ನಡೆಸಿಕೊಟ್ಟ ಅವರು, “ಮುಂಬರುವ ದಿನಗಳಲ್ಲಿ ನಾವು ಬಹುದೊಡ್ಡ ಸವಾಲನ್ನು ಎದುರಿಸಬೇಕಾಗಿದೆ. ಹವಾಮಾನ ಬದಲಾವಣೆ ವೇಗವಾಗಿ ಆಗುತ್ತಿದೆ. ಪ್ರತಿ ದೇಶವೂ ಹವಾಮಾನ ವೈಪರೀತ್ಯ ತಡೆಯ ಕಾರ್ಯಗಳಿಗೆ ಬದ್ಧವಾಗುತ್ತಿವೆ. ಹವಾಮಾನ ವೈಪರೀತ್ಯ ತಡೆಗೆ ಏನು ಮಾಡಬೇಕು ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಚರ್ಚಿಸಲಾಗುತ್ತಿದೆ. 2070ರ ವೇಳೆಗೆ ಇಂಗಾಲದ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆದರೆ ಈ ವಿಚಾರವಾಗಿ ವಿಶ್ವಾಸಾರ್ಹ ತಂತ್ರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
ನವೀಕೃತ ಇಂಧನ ಬಳಕೆಗೆ ಆದ್ಯತೆ ನೀಡುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟರೂ ಸಾಧನೆಯ ದರ ಚಿಕ್ಕದಿದೆ. ಎಲೆಕ್ಟ್ರಾನಿಕ್ ವಾಹನಗಳ ನೋಂದಣಿ ಕೇವಲ ನಾಲ್ಕು ಪರ್ಸೆಂಟ್ ಇದೆ. ಎಲೆಕ್ಟ್ರಾನಿಕ್ ಕಾರುಗಳ ನೋಂದಣಿ ಕೇವಲ 1 % ಇದೆ. ಇದರ ಪ್ರಮಾಣ 2030ರ ವೇಳೆಗೆ ಶೇ. 30 ಆಗಬೇಕೆಂದು ಜನರು ಮಾತನಾಡುತ್ತಾರೆ. ಶೇ.1ರಿಂದ ಶೇ.30ಕ್ಕೆ ಇನ್ನುಳಿದ ಐದಾರು ವರ್ಷಗಳಲ್ಲಿ ಸಾಧಿಸುತ್ತೇವೆಯೇ? ಹೀಗಾಗಿ ನಾವು ಈ ಕುರಿತು ಕೆಲಸ ಮಾಡಬೇಕಾಗುತ್ತದೆ ಎಂದು ಆಶಿಸಿದರು.
ಕೆಲವೊಂದು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಮಾಡಿದರೆ ಕೆಲವೊಂದನ್ನು ರಾಜ್ಯ ಸರ್ಕಾರಗಳು ಕೈಗೆತ್ತಿಕೊಳ್ಳಬೇಕಾಗುತ್ತದೆ. ಎರಡು ಕೂಡ ಸರಿಯಾದ ರೂಪುರೇಷೆಗಳನ್ನು ಹಾಕಿಕೊಂಡರೆ 2070ರ ವೇಳೆಗೆ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.
ಜಾಗತೀಕರಣದ ಆಗುಹೋಗುಗಳ ಕುರಿತು ಮಾತನಾಡಿದ ಅವರು, “ಸಾರ್ವಜನಿಕ ಹೂಡಿಕೆಗಿಂತ ಖಾಸಗಿ ಹೂಡಿಕೆ ಹೆಚ್ಚಿದೆ. ಇದು ಅಪಾಯಕಾರಿ. ಖಾಸಗಿ ಹೂಡಿಕೆಯನ್ನು ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ. 1991ರ ಸ್ಥಿತಿ ಈಗ ಇಲ್ಲ. ಇಂದು ಭದ್ರತಾ ವಿಚಾರಗಳ ಕುರಿತು ದೇಶಗಳು ಯೋಚಿಸುತ್ತಿವೆ. ತಂತ್ರಜ್ಞಾನ ಬೃಹದಾಕಾರವಾಗಿ ಬೆಳೆದಿದೆ. ಜಗತ್ತು ಮತ್ತು ಜನರು ಆಂತರಿಕವಾಗಿ ಸಂಪರ್ಕ ಸಾಧಿಸಿದ್ದಾರೆ. ಆರ್ಟಿಫಿಷಿಯಲ್ ಇಂಟಲೆಜೆನ್ಸ್ ಬಂದಿದೆ. ಮಾಹಿತಿ ಸುಲಭವಾಗಿ ಹಂಚಿಕೆಯಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ತಾತ್ಕಾಲಿಕ ಅಡಚಣೆಗಳು ಇವೆ. ದೂರದೃಷ್ಟಿಯಲ್ಲಿ ತಂತ್ರಜ್ಞಾನವನ್ನು ಅಡಚಣೆ ಎನ್ನಲು ಸಾಧ್ಯವಿಲ್ಲ. ಆದರೆ ಡೇಟಾ ಸುರಕ್ಷತೆಯಲ್ಲಿ ನಾವು ಯಾವ ನೀತಿಗಳನ್ನು ಪಾಲಿಸುತ್ತೇವೆ, ಡಿಜಿಟಲ್ ಟ್ಯಾಕ್ಸೇಷನ್ನಲ್ಲಿ ಯಾವ ನೀತಿಗಳನ್ನು ಪಾಲಿಸುತ್ತೇವೆ ಎಂಬುದು ಮುಖ್ಯ ಎಂದರು.
ಇದನ್ನೂ ಓದಿರಿ: ಹಿಂದುತ್ವ ದರೋಡೆ: ಕುಂದಾಪುರದ ಚೈತ್ರಾರನ್ನು ಬೆಳೆಸಿದ ಸಂಘಟನೆ ಬೆಳೆದು ಬಂದ ದಾರಿ ಇದು…
ಐಐಎಂಬಿಯ ಹಿರಿಯ ಅರ್ಥಶಾಸ್ತ್ರಜ್ಞ ಪ್ರೊ.ಎಂ.ಎಸ್. ಶ್ರೀರಾಮ್ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕೃತಿ ಕುರಿತು ಮಾತನಾಡಿದ ಅವರು, “ಮನಮೋಹನಸಿಂಗ್, ಚಿದಂಬರಂ ಮೊದಲಾದ ಆರ್ಥಿಕ ತಜ್ಞರೊಂದಿಗೆ ಕೆಲಸ ಮಾಡಿದವರು ಮಾಂಟೆಕ್ ಸಿಂಗ್. ಖಾಸಗಿ ಹಿನ್ನಲೆ ಏನಿದ್ದರೂ ಸರ್ಕಾರಗಳ ತುರ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಆಶಯಗಳು ಏನಿದ್ದವು ಎಂಬುದು ಎಂ ಡಾಕ್ಯುಮೆಂಟ್ ಕೃತಿಯಲ್ಲಿ ದಾಖಲಾಗಿವೆ” ಎಂದು ವಿವರಿಸಿದರು.
‘ಬ್ಯಾಕ್ಸ್ಟೇಜ್’ ಎಂಬುದಕ್ಕೆ ’ತೆರೆಮರೆ’ ಎಂಬ ಹೆಸರನ್ನು ಅನುವಾದಕರಾದ ರಾಜಾರಾಮ್ ತಲ್ಲೂರು ಅವರು ನೀಡಿಲ್ಲ. ಅದಕ್ಕೆ ಬದಲಾಗಿ ’ಎಂ ಡಾಕ್ಯುಮೆಂಟ್’ ಎಂದು ನೀಡಿದ್ದಾರೆ. ಆರ್ಥಿಕ ಸುಧಾರಣೆಯ ಅವಧಿಯಲ್ಲಿ ಅನಾಮಧೇಯ ’ಎಂ ಡಾಕ್ಯುಮೆಂಟ್’ ಸದ್ದು ಮಾಡಿತ್ತು. ಈ ಕಡತದ ರೂವಾರಿ ಮಾಂಟೆಕ್ ಸಿಂಗ್ ಅಹ್ಲೂವಾಲಿಯಾ ಆಗಿದ್ದರು ಎಂದು ಸ್ಮರಿಸಿದರು.
ಕೃತಿಯ ಅನುವಾದಕರಾದ ರಾಜರಾಮ್ ತಲ್ಲೂರು ಅವರು ಅನುವಾದದ ಕ್ಷಣಗಳನ್ನು ಹಂಚಿಕೊಂಡರು. ಪ್ರಕಾಶಕರಾದ ಅಕ್ಷತಾ ಹುಂಚದಕಟ್ಟೆ ಹಾಜರಿದ್ದರು. ತಲ್ಲೂರು ಫ್ಯಾಮಿಲಿ ಟ್ರಸ್ಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು.