‘ತಮ್ಮದೇ ಆದಂತ ಸಾಹಿತ್ಯದ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದಭಾವವನ್ನು ಮೀರಿಸುವಂತ ಸಮಾಜದ ಪಿಡುಗುಗಳ ಕುರಿತು ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಕೀರ್ತಿ ಸಂತ ಶ್ರೇಷ್ಠ ಕವಿ ಕನಕದಾಸರಿಗೆ ಸಲ್ಲುತ್ತದೆ’ ಎಂದು ಎಚ್ಡಿಎಂಸಿ ಅಧ್ಯಕ್ಷ ಹಾವಣ್ಣ ಕಕ್ಕಳಮೇಲಿ ಹೇಳಿದರು.
ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಹಾಲುಮತ ಸಮಾಜದ ಬಾಂಧವರು ಹಮ್ಮಿಕೊಂಡಿದ್ದ ಸಂತ ಕನಕದಾಸರ 536ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸುಮಾರು ಐನೂರು ವರ್ಷಗಳ ಕಾಲ ಹಿಂದೆ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಕನಕದಾಸರು, ಕುಲ ಕುಲವೆಂದು ಹೊಡೆದಾಡಿ ಸಾಯಬೇಡಿರಿ ಹುಚ್ಚಪ್ಪಗಳಿರಾ, ಆತ್ಮ ಯಾವ ಕುಲ, ಜೀವ ಯಾವ ಕುಲ ಬೀಸುವ, ಗಾಳಿ ಯಾವ ಕುಲ, ಹರಿಯುವ ನೀರು ಯಾವ ಕುಲ, ತಿನ್ನುವ ಅನ್ನ ಯಾವ ಕುಲ, ಯಾವಾಗ ನಿಮ್ಮಲ್ಲಿ ಅಡಗಿರುವ ನಾನು ಎಂಬ ಅಹಂ ನಿಮ್ಮನ್ನು ಬಿಟ್ಟು ಹೋಗುತ್ತೋ, ಅವತ್ತೇ ನೀವು ಮೋಕ್ಷಕ್ಕೆ ಅರ್ಹರಾಗುತ್ತೀರಿ ಎಂದು ಸಾರಿ ಹೇಳಿದ್ದರು. ಕನಕದಾಸರು ಅಗಲಿ 536 ವರ್ಷಗಳು ಕಳೆದರೂ ಕೂಡ, ಅವರ ಹೆಸರು ಅವರ ಸಾಹಿತ್ಯ, ವಚನಗಳು ಸೂರ್ಯ ಚಂದ್ರ ಇರುವರೆಗೂ ಅಜರಾಮರ’ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಕನಕಸೇನಾ ಅಧ್ಯಕ್ಷ ಶಿವು ಕೇರಿಗೊಂಡ, ರಾಜು ಮಳಗಿ, ಸಲೀಂ ಕಣ್ಣಿ, ರಾಮಚಂದ್ರ ಕೇರಿಗೊಂಡ, ಸಂತೋಷ ಸಿನ್ನೂರ, ಗುರು ಅಗಸರ, ಅಮೋಘ ಸಿದ್ದ ಗಾಳಿ, ಬೀಮಣ್ಣ ಗಾಳಿ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.