ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನು ಸುಟ್ಟು ಹಾಕಿರುವ ಬಿಜೆಪಿ ಶಾಸಕ ಕೆ ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವುದು ಬಿಜೆಪಿ ಕೆಲಸ” ಎಂದಿದ್ದಾರೆ.
“ಪ್ರಣಾಳಿಕೆ ಇಷ್ಟ ಇರಲಿ, ಬಿಡಲಿ ಅದನ್ನು ಸುಡಬಾರದು. ಜನರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಬಿಜೆಪಿ ನಾಯಕರು ಸುಟ್ಟು ಹಾಕಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ” ಎಂದು ಟೀಕಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸಹಿಷ್ಣುತೆ ಪ್ರಮುಖವಾಗಿದೆ. ಈಶ್ವರಪ್ಪ ಕೃತ್ಯಕ್ಕೆ ತಕ್ಕ ಉತ್ತರವನ್ನು ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರಣಾಳಿಕೆ ಸಮಿತಿಯ ಪರಮೇಶ್ವರ ಹಾಗೂ ತಂಡ ಉತ್ತರಿಸಲಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಜನರ ತೀರ್ಪು ಸಿದ್ಧವಾಗಿದೆ: ಹರಿಪ್ರಸಾದ್
“ರಾಜಕೀಯ ಅಪ್ರಬುದ್ಧತೆ, ಅವಿವೇಕಿತನದಿಂದ ಪಕ್ಷದಿಂದಲೇ ಹೊರದಬ್ಬಲ್ಪಟ್ಟಿರುವ ಈಶ್ವರಪ್ಪ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಟ್ಟಿದ್ದಾರೆ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಬೆಂಕಿ ಇಟ್ಟು ಬಿ ರಿಪೋರ್ಟ್ ತೆಗೆದುಕೊಂಡಷ್ಟು ಸುಲಭವಲ್ಲ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಎದುರಿಸುವುದು. ಜನರ ತೀರ್ಪು ಸಿದ್ಧವಾಗಿದೆ, ಎದುರಿಸಲು ಸಿದ್ಧತೆ ಮಾಡಿಕೊಳ್ಳಿ” ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಟ್ವೀಟ್ ಮಾಡಿ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.