- ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿದ ಮಾಜಿ ಸಿಎಂ ಬೊಮ್ಮಾಯಿ
- ‘ಲಿಂಗಾಯತ ಸಮುದಾಯವನ್ನು ಬಿಜೆಪಿ ಗೌರವದಿಂದಲೇ ನೋಡಿದೆ’
ಲಿಂಗಾಯತ ಸಮುದಾಯವನ್ನು ಬಿಜೆಪಿ ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ನಮ್ಮ ಪಕ್ಷದ ವಿಚಾರದಲ್ಲಿ ನೀವು ತಲೆ ಹಾಕುವ ಅವಶ್ಯಕತೆ ಇಲ್ಲ. ಲಿಂಗಾಯತ ಸಮುದಾಯದ ಮೇಲೆ ನಿಮಗೆ ನಿಜವಾದ ಪ್ರೀತಿ ಇದ್ದಿದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
“ಜೋಶಿ, ಸಂತೋಷ್ ಅವರು ಪ್ರತಾಪ್ ಸಿಂಹ ಅವರ ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು ಬಸವರಾಜ ಬೊಮ್ಮಾಯಿ ಅವರ ಎದೆಗೆ ತಗುಲಿದೆ! ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್! ಬೊಮ್ಮಾಯಿಯವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದಂತಾಗುತ್ತದೆ!” ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬೊಮ್ಮಾಯಿ ಟ್ವೀಟ್ ಮಾಡಿ ಉತ್ತರಿಸಿದ್ದಾರೆ.
“ಭಾರತೀಯ ಜನತಾ ಪಾರ್ಟಿ ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವದಿಂದಲೇ ನೋಡಿಕೊಂಡು ಬಂದಿದೆ. ಬಿಜೆಪಿ ಎಂಬುವ ಒಂದೇ ಗುಡಿ ಇದ್ದು ಎಲ್ಲರಿಗೂ ಪ್ರವೇಶವಿದೆ. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಅವಧಿ ಅಧಿಕಾರ ನಡೆಸಿದರೂ ನನ್ನ ಸಮೇತವಾಗಿ ನಾಲ್ವರು ಮುಖ್ಯಮಂತ್ರಿಗಳಲ್ಲಿ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿರುವುದೇ ಇದಕ್ಕೆ ಸಾಕ್ಷಿ” ಎಂದು ಬೊಮ್ಮಾಯಿ ಹೇಳಿದ್ದಾರೆ.
“ಕಾಂಗ್ರೆಸ್ ಪಕ್ಷ ಕಳೆದ ಮೂವತೈದು ವರ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರುವುದು ಜಗತ್ತಿಗೆ ಗೊತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಲಿಂಗಾಯತ ಸಮುದಾಯದ ಮೇಲೆ ನಿಜವಾದ ಪ್ರೀತಿ ಇದ್ದರೆ ನೀವು ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಿರಿ. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ” ಎಂದಿದ್ದಾರೆ.
35 ವರ್ಷ ಇದೇ ಚಿಂತೆ ಮಾಡಿದ್ದೀರಿ ಇನ್ನಾದರೂ ಆರಾಮವಾಗಿ ಜನರ ಚಿಂತನೆ ಮಾಡಿ.