ಎಪ್ಪತ್ತು ವರ್ಷಗಳ ಕಾಲ ಭಾರತವನ್ನು ಆಳಿದ ಕಾಂಗ್ರೆಸ್ ಎಂದೂ ನ್ಯಾಯಾಲಯದ ವಿರುದ್ಧ ಪ್ರತಿಭಟನೆ ಮಾಡಿಲ್ಲ. ನ್ಯಾಯಾಲಯದ ಘನತೆ ಗೌರವ ಹೆಚ್ಚಿಸುವುದಕ್ಕೆ ಕಾಂಗ್ರೆಸ್ ಎಂದೆಂದೂ ಬದ್ಧವಾಗಿದೆ. ಕೇವಲ ಮೋದಿ ಎಂಬ ಉಪನಾಮದ ಕುರಿತು ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಆಡಿದ ಮಾತುಗಳ ವಿಚಾರವಾಗಿ ಕೋರ್ಟ್ನಲ್ಲಿ ತೆರೆಮರೆಯಲ್ಲಿ ನಿಂತು ಅಧಿಕಾರಶಾಹಿ ಶಕ್ತಿಗಳು ಕಾನೂನನ್ನು ತಮ್ಮ ಗಾಳವನ್ನಾಗಿ ಬಳಸಿ ಕೊಳ್ಳುತ್ತಿದ್ದಾರೆಂಬ ಊಹೆ ಭಾರತೀಯರಲ್ಲಿ ಮೂಡುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾಂಗ್ರೆಸ್ ಪ್ರತಿಭಟನೆ ಕೋರ್ಟ್ ವಿರುದ್ಧವೇ ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್ ಹುಟ್ಟಿದಾಗಿನಿಂದ ಸ್ವಾತಂತ್ರ್ಯಕ್ಕೆ ಮೊದಲು ಸ್ವಾತಂತ್ರ್ಯ ನಂತರ ಅಸಂಬದ್ಧ ಆಡಳಿತದ ವಿರುದ್ಧ ಚಳುವಳಿ ಮುಖಾಂತರ ನಾಡಿನ ಹಿತಕ್ಕಾಗಿ ತಾಯ್ನೆಲದ ಹಿತಕ್ಕಾಗಿ ಹೋರಾಡುತ್ತಾ ಬಂದ ಪಕ್ಷವಾಗಿದೆ. ಮಹಾತ್ಮಾ ಗಾಂಧಿಯವರ ಅಹಿಂಸಾ ಸಿದ್ದಾಂತವೇ ನಮ್ಮ ಪಕ್ಷದ ಮೂಲ ಧ್ಯೇಯವಾಗಿದೆ. ಕಾಂಗ್ರೆಸ್ ನವರು ಅಪ್ರಬುದ್ಧರ ಹಾಗೆ ವರ್ತಿಸುತ್ತಿದ್ದಾರೆ ಎಂಬ ಅವರ ಹೇಳಿಕೆಗೆ ಉತ್ತರವಾಗಿ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಪ್ರಬುಧ್ಧರೆಂಬುದಕ್ಕೆ 135 ಶಾಸಕರ ಬಲ ಕೊಟ್ಟಿದ್ದಾರೆ. ಸೋತ ಬಿಜೆಪಿಯವರು ಅಪ್ರಬುದ್ಧರೆಂಬುದನ್ನು ಮತದಾರರು ತೋರಿಸಿ ಕೊಟ್ಟಿದ್ದಾರೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಜೆಟ್ನಲ್ಲಿ ಕೃಷಿ ಕ್ಷೇತ್ರ, ರೈತರ ನಿರ್ಲಕ್ಷ ಖಂಡನೀಯ: ಎಐಕೆಕೆಎಂಎಸ್
“ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳ ಜನಪ್ರಿಯತೆ ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಗೆ ರಾಹುಲ್ ಗಾಂಧಿಯವರ ಅನರ್ಹತೆಯ ಪರಿಣಾಮ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ರಾಷ್ಟ್ರದ ಜನತೆ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಹವನಿಸುತ್ತಿದ್ದಾರೆ” ಎಂದು ಪ್ರತಿಕ್ರಿಸಿದರು.