ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು, ದಾವಣಗೆರೆ ನಗರದ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ 2022-23ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವ ಅನೇಕ ಕಾರ್ಮಿಕರಿಗೆ ಈವರೆಗೂ ಸಹಾಯಧನ ಬಿಡುಗಡೆಯಾಗಿಲ್ಲ. 2021-22ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 1.50 ಲಕ್ಷದಷ್ಟು ಜನ ಫಲಾನುಭವಿಗಳಿಗೆ ಸಹಾಯಧನ ಬಾಕಿ ಉಳಿದಿದೆ. 2023-24ನೇ ಸಾಲಿನ ಶೈಕಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆದಿದ್ದರೂ, ಇನ್ನೂ ಸಹಾಯಧನಕ್ಕಾಗಿ ಅರ್ಜಿಯನ್ನೇ ಆಹ್ವಾನಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ, ಉದ್ಯೋಗ ಮತ್ತು ಸೇವಾ ಷರತ್ತುಗಳ ಕಾಯ್ದೆ 1996ರ ನಿಯಮ 45ರ ಅಡಿಯಲ್ಲಿ, ಕಟ್ಟಡ ನಿರ್ಮಾಣ ಕಾರ್ಮಿಕರ ಇಬ್ಬರು ಮಕ್ಕಳಿಗೆ ಪ್ರತಿ ವರ್ಷ ಕಲಿಕಾ ಭಾಗ್ಯ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡಬೇಕು. ನೋಂದಾಯಿತ ಕಾರ್ಮಿಕರು ಸೌಲಭ್ಯ ಪಡೆಯುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲವಾಗಿದೆ. ಸಹಾಯಧನ ನಿಲ್ಲಿಸಿರುವುದರಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸಾಧ್ಯತೆಯೇ ಹೆಚ್ಚಿದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಕ್ಕೆ ಕಲ್ಯಾಣ ಮಂಡಳಿಯೇ ಕಾರಣವಾಗುವುದು ಸರಿಯಲ್ಲ ಎನ್ನುವುದು ಪ್ರತಿಭಟನಾಕಾರರ ಅಭಿಪ್ರಾಯ.
ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಲು ಹಣದ ಕೊರತೆ ಎಂದು ಹೇಳಲಾಗುತ್ತಿದೆ. ಹಣ ಇಲ್ಲ ಎನ್ನುವಾಗಲೆ ಟ್ಯಾಬ್, ಲ್ಯಾಪ್ಟಾಪ್ ಹಾಗೂ ಸ್ಕೂಲ್ ಕಿಟ್ ಗಳನ್ನು ಖರೀದಿಸಿ ನೀಡಲಾಗಿತ್ತು. ಈಗಲೂ ಪ್ರತಿ ಲ್ಯಾಪ್ಟಾಪ್ ಗೆ 71 ಸಾವಿರ ರೂಪಾಯಿಯಂತೆ 10 ಸಾವಿರ ಲ್ಯಾಪ್ಟಾಪ್ಗಳನ್ನು ಖರೀದಿಸಲಾಗಿದೆ. ನೇರ ಹಣ ವರ್ಗಾವಣೆಗೆ ಹಣ ಇಲ್ಲ. ಆದರೆ, ಖರೀದಿಗೆ ಹಣವಿದೆಯೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ನಿಯಮಾವಳಿಗಳನ್ನು ಮೀರಿ, ಕಲ್ಯಾಣ ಮಂಡಳಿಯ ಹಣವನ್ನು ನೀರಿನಂತೆ ಖರ್ಚು ಮಾಡಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು. ಶೈಕ್ಷಣಿಕ ಸಹಾಯ ಧನ ನೀಡಲು ಹಣವಿಲ್ಲ ಎಂಬ ಮಾತನ್ನು ನಾವು ಒಪ್ಪವುದಿಲ್ಲ. ಸಹಾಯಧನ ಬಿಡುಗಡೆ ಮಾಡಲು ಹಣವಿಲ್ಲದಿದ್ದಲ್ಲಿ, ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಪಡೆದು ಸಹಾಯಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜ್, ಜಿ.ಡಿ. ಮಂಜುನಾಥ್, ನೇತ್ರಾವತಿ, ರಕ್ಷಿತಾ, ಬೇತೂರು ಹನುಮಂತಪ್ಪ, ಶ್ರೀನಿವಾಸಮೂರ್ತಿ, ಭಾನುವಳ್ಳಿ ಇರ್ಫಾನ್, ಕರಿಯಪ್ಪ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.