ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಬಳಿಕ ಬಿಡುಗಡೆಗೊಂಡಿದ್ದ ಏಳು ಅಪರಾಧಿಗಳಲ್ಲಿ ಒಬ್ಬನಾದ ಸಂತನ್ ಅಲಿಯಾಸ್ ಟಿ ಸುಥೆಂತಿರಾಜ ಬುಧವಾರ ಸಾವನ್ನಪ್ಪಿದ್ದಾರೆ. ಅನರೋಗ್ಯದಿಂದ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಆತ, ಚಿಕಿತ್ಸೆಗೆ ಸ್ಪಂದಿಸದೆ ಮರಣಗೊಂಡಿದ್ದಾರೆ.
ಯಕೃತ್ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಸಂತನ್, ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಏಳು ಅಪರಾಧಿಗಳಲ್ಲಿ ಒಬ್ಬನಾಗಿದ್ದ ಎ.ಜಿ ಪೆರಾರಿವಾಲನ್ ಅವರನ್ನು 2022ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆಗೊಳಿಸಿತ್ತು. ಸಂತಾನ್ ಮತ್ತು ಇತರ ಐವರನ್ನು ಅದೇ ವರ್ಷ ನವೆಂಬರ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಅವರೆಲ್ಲರೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರರಣದಲ್ಲಿ 30 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು.
ಶ್ರೀಲಂಕಾದ ಪ್ರಜೆಯಾದ ಸಂತನ್, ತನ್ನ ವಯಸ್ಸಾದ ತಾಯಿಯೊಂದಿಗೆ ವಾಸಿಸಲು ಶ್ರೀಲಂಕಾಗೆ ಮರಳಲು ಅವಕಾಶಕ್ಕಾಗಿ ಮನವಿ ಮಾಡಿದ್ದರು. ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ತಮಿಳುನಾಡು ಸರ್ಕಾರ, ‘ಸಂತನ್ ಶ್ರೀಲಂಕಾಗೆ ಮರಳಲು ಬೇಕಿರುವ ಅಗತ್ಯ ದಾಖಲೆಗಳನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದೆ’ ಎಂದು ಹೇಳಿತ್ತು. ಕಳೆದ ವಾರ, ಕೇಂದ್ರ ವಿದೇಶಾಂಗ ಸಚಿವಾಲಯದ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್ಆರ್ಆರ್ಒ) ಸಂತಾನ್ಗೆ ತುರ್ತು ಪ್ರಯಾಣದ ದಾಖಲೆಯನ್ನು ನೀಡಿದ್ದರು.