- ಕೇರಳ, ಹರಿಯಾಣ ಹಾಗೂ ದೆಹಲಿ ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ ಆರಂಭಿಸಿದ ಆರೋಗ್ಯ ಇಲಾಖೆ
ದೇಶದಾದ್ಯಂತ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಂದು ದಿನದಲ್ಲಿ 5,676 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈಗಾಗಲೇ ಕೇರಳ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದಲ್ಲಿ ಸದ್ಯ ಸೋಂಕಿತರ ಸಂಖ್ಯೆ 1,673 ಇದ್ದು, ಏ.10 ಮತ್ತು 11 ರಂದು ರಾಜ್ಯದ ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸನೆ ನಡೆಸುವ ಅಣಕು ಡ್ರಿಲ್ ಮಾಡಲಾಗುತ್ತಿದೆ.
ಕೊರೊನಾ ಸಕ್ರಿಯ ಪ್ರಕರಣಗಳ ಹೆಚ್ಚಳವನ್ನು ಎದುರಿಸಲು ಆರೋಗ್ಯ ಸೌಲಭ್ಯಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ಖಚಿತತೆಗಾಗಿ ಕಾರ್ಯಕ್ರಮ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ಗಳು, ಅಗತ್ಯ ಔಷಧಗಳು, ಮಾಸ್ಕ್ಗಳು, ಪಿಪಿಇ ಕಿಟ್ಗಳು, ಟೆಲಿಮೆಡಿಸಿನ್ ಸೇವೆಗಳು ಮತ್ತು ಆಮ್ಲಜನಕ ಸಿಲಿಂಡರ್ಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಇದಾಗಿದೆ.
ಏಪ್ರಿಲ್ 10 ಮತ್ತು 11 ರಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದ ಅಣಕು ಡ್ರಿಲ್ಅನ್ನು ಕರ್ನಾಟಕದಲ್ಲಿಯೂ ಕೈಗೊಳ್ಳಲಾಗುತ್ತಿದೆ. ಈ ಮೂಲಕ ತುರ್ತು ಸಂದರ್ಭದಲ್ಲಿ, ಇಲ್ಲವೇ ದಿಢೀರ್ ಕೊರೊನಾ ಏರಿಕೆ ಆದರೂ ಕರ್ನಾಟಕ ಆರೋಗ್ಯ ಇಲಾಖೆ ಎದುರಿಸಲು ಸಿದ್ಧ ಎಂದು ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕ ನವೀನ್ ಭಟ್ ವೈ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಶಿಕ್ಷಕ ಅಮಾನತು
ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್ ದೃಢಪಟ್ಟ 5,676 ಪ್ರಕರಣಗಳು ಪತ್ತೆಯಾಗಿವೆ. ಸೋಮವಾರ ದೇಶದಲ್ಲಿ 5,888 ಪ್ರಕರಣಗಳು ಪತ್ತೆಯಾಗಿದ್ದವು. ದೇಶದಲ್ಲಿ 37,093 ರಷ್ಟು ಸಕ್ರಿಯ ಕೋವಿಡ್ ಪ್ರಕರಣಗಳಿರುವುದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶದಿಂದ ತಿಳಿದುಬಂದಿದೆ.
ದೇಶದಲ್ಲಿ ಕೋವಿಡ್ ನಿರಂತರವಾಗಿ ಹೆಚ್ಚಳವಾಗುತ್ತಿರುವುದಕ್ಕೆ ಮೂರು ಮುಖ್ಯ ಕಾರಣಗಳನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಹಿರಂಗಪಡಿಸಿತ್ತು. ಕೋವಿಡ್–19ಗೆ ಸಂಬಂಧಿಸಿದ ಸೂಕ್ತ ಕ್ರಮಗಳನ್ನು ಪಾಲಿಸದೆ ನಿರ್ಲಕ್ಷ್ಯವಹಿಸುತ್ತಿರುವುದು. ಕೊರೊನಾ ಸೋಂಕು ಪತ್ತೆ ಪರೀಕ್ಷೆ ಕಡಿಮೆಯಾಗಿರುವುದು ಹಾಗೂ ಕೊರೊನಾ ವೈರಸ್ನ ಹೊಸ ರೂಪಾಂತರಿ ತಳಿಯಿಂದಾಗಿ ಕೋವಿಡ್ ಉಲ್ಬಣಗೊಂಡಿದೆ ಎನ್ನಲಾಗುತ್ತಿದೆ.